ಧಾರವಾಡ: ಶಿವಮೊಗ್ಗ, ಬೀದರ್ ಬಳಿಕ ಇದೀಗ ಧಾರವಾಡದಲ್ಲಿಯೂ (Dharwad) ಜನಿವಾರ ಕತ್ತರಿಸಿ ಸಿಇಟಿ ಪರೀಕ್ಷೆಗೆ ಅವಕಾಶ ಕೊಟ್ಟಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆಯ ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಧಾರವಾಡ ನಗರದ ಜೆಎಸ್ಎಸ್ (JSS) ಕಾಲೇಜಿನ ವಿದ್ಯಾರ್ಥಿ ನಂದನ್ ಏರಿ ಸಿಇಟಿ ಪರೀಕ್ಷೆ (CET Exam) ಬರೆಯಲು ಹೋಗಿದ್ದ. ವಿದ್ಯಾರ್ಥಿಗಳ ತಪಾಸಣೆ ಮಾಡುವಾಗ ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಬ್ಬರು ನಂದನ್ ಎಂಬ ಅಭ್ಯರ್ಥಿ ಹಾಕಿಕೊಂಡಿದ್ದ ಜನಿವಾರವನ್ನು ಗಮನಿಸಿದ್ದರು. ಆಗ ಜನಿವಾರ ಹಾಕಿಕೊಂಡು ಪರೀಕ್ಷಾ ಕೇಂದ್ರದೊಳಗೆ ಹೋಗುವಂತಿಲ್ಲ ಎಂದು ತಡೆದಿದ್ದರು. ಅದಕ್ಕೆ ವಿದ್ಯಾರ್ಥಿ ನಾನು ಬ್ಯಾಗಿನೊಳಗೆ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ ಅದಕ್ಕೂ ಅವಕಾಶ ನೀಡದೇ ಅದಕ್ಕೆ ಸಮಯವಿಲ್ಲ ಎಂದು ಜನಿವಾರವನ್ನು ಕತ್ತರಿಸಿದ್ದರು. ಅದನ್ನು ಹಾಗೇ ಬ್ಯಾಗ್ನಲ್ಲಿಟ್ಟುಕೊಂಡಿದ್ದ ನಂದನ್ ಗಾಬರಿಗೊಳಗಾಗಿದ್ದ. ಇದನ್ನೂ ಓದಿ: PUBLiC TV ವಿದ್ಯಾಪೀಠ | ವಿದ್ಯಾರ್ಥಿಗಳಿಗೆ ಸ್ಪಾಟ್ನಲ್ಲೇ ಸಿಗಲಿದೆ ಸರ್ಪ್ರೈಸ್ ಗಿಫ್ಟ್ – ತಪ್ಪದೇ ಬನ್ನಿ…
ಮಾಧ್ಯಮಗಳಲ್ಲಿ ಕಳೆದೆರಡು ದಿನಗಳಿಂದ ಬರುತ್ತಿದ್ದ ಶಿವಮೊಗ್ಗ, ಬೀದರ್ ಜನಿವಾರದ ಸುದ್ದಿಗಳನ್ನು ಗಮನಿಸಿದ್ದ ಹುಡುಗ ತನಗಾಗಿದ್ದರ ಕುರಿತು ತನ್ನ ತಂದೆಗೆ ತಿಳಿಸಿದ್ದಾನೆ. ಇದನ್ನು ತಿಳಿದ ತಂದೆ ಆಕ್ರೋಶಗೊಂಡಿದ್ದು, ಇದೇ ಕಾರಣದಿಂದ ಮಗನಿಗೆ ಸರಿಯಾಗಿ ಪರೀಕ್ಷೆ ಬರೆಯಲು ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ನಂದನ್ ತಂದೆ ವಿವೇಕ ಮಾತನಾಡಿ, ಪರೀಕ್ಷೆಗೆ ಹೋದಾಗ ಪೊಲೀಸರು ಆತನನ್ನು ಹಿಡಿದುಕೊಂಡು ಜನಿವಾರ ತೆಗೆದರೆ ಮಾತ್ರ ಒಳಗೆ ಬಿಡುತ್ತೇನೆ ಎಂದಿದ್ದಾರೆ. ಇದು ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅಪಮಾನ. ನಾವು ಜನಿವಾರ ತೆಗೆಯುವುದು ಸತ್ತಾಗ ಮಾತ್ರ, ಇನ್ಯಾವುದೇ ಸಮಯದಲ್ಲಿಯೂ ನಾವು ತೆಗೆಯಲ್ಲ. ಕೆಲವರು ರುದ್ರಾಕ್ಷಿ, ಕಾಶಿ ದಾರ ತೆಗೆದಿದ್ದಾರೆ. ಈ ರೀತಿ ನಮ್ಮ ಮೇಲೆ ನಡೆದಿದ್ದು ದೊಡ್ಡ ಘಟನೆ. ಮಾರನೇ ದಿನ ಆತ ನಮಗೆ ಹೇಳಿದ್ದಾನೆ. ನಾವು ನಮ್ಮ ಸಮಾಜದ ಜನರಿಗೆ ಹೇಳಿದ್ದೇನೆ. ಇದಕ್ಕೆ ನಾವು ಪ್ರತಿಭಟನೆ ಮಾಡುತ್ತೇವೆ. ಇದು ನನ್ನ ಮಗನ ಮೇಲೆ ಪರಿಣಾಮ ಬೀರಿದೆ. ಆತ ಪರೀಕ್ಷೆ ಕೂಡಾ ಸರಿಯಾಗಿ ಬರೆದಿಲ್ಲ, ಮಾನಸಿಕವಾಗಿ ಆತ ಕುಗ್ಗಿದ್ದಾನೆ. ಅಭ್ಯಾಸ ಬಿಟ್ಟು ಬೇರೆ ಕಡೆ ಆತನ ಮನಸ್ಸು ಡೈವರ್ಟ್ ಆಗದಿರಲಿ ಎಂದು ನಾವು ಇದನ್ನು ಹೊರಗೆ ಹಾಕಿಲ್ಲ. ಈಗ ಹೇಳುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.ಇದನ್ನೂ ಓದಿ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಡಿಕೆಶಿ ಭೇಟಿ – ಧರ್ಮಾಧಿಕಾರಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಸಿಎಂ