ನವದೆಹಲಿ: ತಾಲಿಬಾನ್ (Taliban) ಜೊತೆ ಪಾಕಿಸ್ತಾನ (Pakistan) ಡಬಲ್ ಗೇಮ್ ಆಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (Jaishankar) ಟೀಕಿಸಿದ್ದಾರೆ.
ಗುಜರಾತ್ನ ಚರೋತರ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿದೆ. ಆದರೆ, ಅಫ್ಘಾನಿಸ್ತಾನದಿಂದ ಅಮೆರಿಕನ್ನರು ಹೊರಟುಹೋದಾಗ, ಡಬಲ್ ಗೇಮ್ ಆಟ ಮುಂದುವರಿಸಲು ಪಾಕಿಸ್ತಾನಗೆ ಸಾಧ್ಯವಾಗುತ್ತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಟ್ರಂಪ್ ಬೆದರಿಕೆ ನಡುವೆ ಭಾರತದ ಪ್ರಜೆಗಳಿಗೆ 85,000 ವೀಸಾ ನೀಡಿದ ಚೀನಾ
ಅಫ್ಘಾನಿಸ್ತಾನದಲ್ಲಿ ಸಂಪೂರ್ಣವಾಗಿ ಭಯೋತ್ಪಾದನೆ ಸೃಷ್ಟಿಸಿದ್ದು ಪಾಕಿಸ್ತಾನ. ಡಬಲ್ ಗೇಮ್ನಿಂದ ಅವರು ಪಡೆಯುತ್ತಿದ್ದ ಪ್ರಯೋಜನ ಈಗ ಇಲ್ಲವಾಗಿದೆ. ಪಾಕಿಸ್ತಾನವೇ ಉತ್ತೇಜಿಸಿದ ಭಯೋತ್ಪಾದನಾ ವ್ಯವಸ್ಥೆ ಈಗ ಆ ದೇಶವನ್ನೇ ಕಚ್ಚಲು ಹೊರಟಿದೆ ಎಂದು ಹೇಳಿದ್ದಾರೆ.
ನೆರೆಯ ದೇಶದಿಂದ ಇಂತಹ ನಡವಳಿಕೆಯನ್ನು ಇನ್ಮುಂದೆ ಸಹಿಸಲಾಗುವುದಿಲ್ಲ ಎಂದು ಭಾರತೀಯರು ಸಾಮೂಹಿಕವಾಗಿ ಭಾವಿಸಿದ್ದಾರೆ. ಆ ಭಾವನೆ ಭಾರತೀಯ ಸಮಾಜದಲ್ಲಿ ಬಹಳ ಪ್ರಬಲವಾಗಿತ್ತು. ಆದರೆ ಆ ಸಮಯದಲ್ಲಿ ಸರ್ಕಾರವು ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲದಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ಬದಲಾಗಿದೆ. ಪಾಕಿಸ್ತಾನವೂ ಬದಲಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ. ದುರದೃಷ್ಟವಶಾತ್ ಅವರು ಹಲವು ವಿಧಗಳಲ್ಲಿ ತಮ್ಮ ಕೆಟ್ಟ ಅಭ್ಯಾಸಗಳನ್ನು ಮುಂದುವರಿಸುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: National Herald Case| ಫಸ್ಟ್ ಟೈಂ ರಾಹುಲ್, ಸೋನಿಯಾ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ
2014 ರ ನಂತರ ಭಾರತದಲ್ಲಿ ಸರ್ಕಾರ ಬದಲಾದ ನಂತರ ಭಯೋತ್ಪಾದಕ ಕೃತ್ಯಗಳು ನಡೆದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ದೃಢ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಈ ಅವಧಿಯಲ್ಲಿ ನಾವು (ಭಾರತ) ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬೆಳೆದಿದ್ದೇವೆ. ಜಗತ್ತಿನಲ್ಲಿ ನಮ್ಮ ಸ್ಥಾನಮಾನ ಸುಧಾರಿಸಿದೆ. ಆದರೆ, ಪಾಕಿಸ್ತಾನವು ಹಳೆಯ ನೀತಿಯನ್ನು ಮುಂದುವರಿಸಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.