ಸೀಜ್ ಆಗಿದ್ದ ಹಣಕ್ಕೆ ಕನ್ನ ಹಾಕಿದ ಸೈಬರ್ ವಂಚಕರು – ನಕಲಿ ಕೋರ್ಟ್ ಆರ್ಡರ್ ತಯಾರಿಸಿ 1.32 ಕೋಟಿ ಲೂಟಿ

Public TV
2 Min Read
Bank Sezied Amount Scam Bnegaluru

ಬೆಂಗಳೂರು: ಬೇರೆ ಬೇರೆ ಕೇಸ್‌ಗಳಲ್ಲಿ ಸೀಜ್ ಆದ ಹಣ ಲೂಟಿ ಮಾಡಲು ನಕಲಿ ಕೋರ್ಟ್ ಆರ್ಡರ್ ತಯಾರಿಸಿ, 1.32 ಕೋಟಿ ರೂ. ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಇಷ್ಟು ದಿನ ಸೈಬರ್ ವಂಚಕರು ನಿಮ್ಮ ಅಕೌಂಟ್‌ನಲ್ಲಿರುವ ಹಣಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದರು. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ವಂಚನೆಗೊಳಗಾದವರ ಸೀಜ್ ಹಣಕ್ಕೆ ಕನ್ನ ಹಾಕಲು, ನಕಲಿ ಕೋರ್ಟ್ ಆರ್ಡರ್ ನೀಡಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ.ಇದನ್ನೂ ಓದಿ: 27ನೇ ವಯಸ್ಸಿಗೆ ಬದುಕು ಮುಗಿಸಿದ ‘ಆಸ್ಟ್ರೇಲಿಯಾದ ನೆಕ್ಸ್ಟ್ ಟಾಪ್ ಮಾಡೆಲ್’ ಮಾಜಿ ಸ್ಪರ್ಧಿ

ಸಾಮಾನ್ಯವಾಗಿ ಸೈಬರ್ ವಂಚನೆಯ ಸ್ಟೋರಿಗಳನ್ನು ನೀವೆಲ್ಲ ನೋಡಿರುತ್ತೀರಿ. ಆದರೆ ಇದೀಗ ವಂಚಕರು ಸೀಜ್ ಆದ ಹಣಕ್ಕೆ ಕನ್ನ ಹಾಕಿದ್ದಾರೆ. ಬೆಟ್ಟಿಂಗ್‌ನಲ್ಲಿ ಅರೆಸ್ಟ್ ಆಗಿದ್ದ ಆರೋಪಿಗಳು, ಜೈಲಿಂದ ಹೊರಬಂದು ತನ್ನ ಖತರ್ನಾಕ್ ಬುದ್ಧಿಯಿಂದ ಸರ್ಕಾರಕ್ಕೆ ಪಂಗನಾಮ ಹಾಕಿದ್ದಾನೆ. ಆರೋಪಿಗಳನ್ನು ಸಾಗರ್ ಲಕುರ, ಅಭಿಮನ್ಯು, ನಿರಜ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಸಾಗರ್. ಬ್ಯಾಂಕ್‌ನಲ್ಲಿ ಫ್ರೀಜಾದ ಹಣವನ್ನು ಟಾರ್ಗೆಟ್ ಮಾಡಿ, ಅದನ್ನು ಲಪಟಾಯಿಸುವ ಕಲೆ ಹೊಂದಿದ್ದ.

ಹೌದು, ಬ್ಯಾಂಕ್ ದರೋಡೆ ಮಾಡದೇ ಬ್ಯಾಂಕಿನಿಂದ ಹಣ ವಂಚಿಸಿದ್ದಾರೆ. ನಕಲಿ ಕೋರ್ಟ್ ಆರ್ಡರ್ ಮಾಡಿ, ಸರ್ಕಾರದ ನಕಲಿ ಮೇಲ್ ಐಡಿ ಯೂಸ್ ಮಾಡಿಕೊಂಡು ಒಂದೂವರೆ ಕೋಟಿ ಹಣ ವಂಚಿಸಿದ್ದಾರೆ. ಆರೋಪಿ ಸಾಗರ್ ಆಕ್ಸಿಸ್ ಬ್ಯಾಂಕ್‌ಲ್ಲಿ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಹಣವನ್ನು ಯಾವ ರೀತಿ ಫ್ರೀಜ್ ಮಾಡುತ್ತಾರೆ ಹಾಗೂ ಯಾವ ರೀತಿ ರಿಲೀಸ್ ಮಾಡುತ್ತಾರೆ ಎಂದು ತಿಳಿದುಕೊಂಡಿದ್ದ.

ತಾನೊಬ್ಬ ಸರ್ಕಾರಿ ಅಧಿಕಾರಿ, ತನಗೆ ಸರ್ಕಾರದ ಮೇಲ್ ಐಡಿ ಬೇಕು ಎಂದು ಮನವಿ ಸಲ್ಲಿಸಿ ಅಧಿಕೃತವಾಗಿ ಸರ್ಕಾರದಿಂದಲೇ ಮೇಲ್ ಐಡಿ ಪಡೆದುಕೊಂಡಿದ್ದ. ಫೋಟೋಶಾಪ್‌ನಲ್ಲಿ ನಕಲಿ ಕೋರ್ಟ್ ಆರ್ಡರ್ ತಯಾರಿಸಿ, ಅದಕ್ಕೆ ರಾಜ್ಯ ಸರ್ಕಾರದ ಸೀಲ್ ಎಲ್ಲವನ್ನು ಹಾಕಿ ಇಮೇಲ್ ಮೂಲಕ ಬೆಂಗಳೂರಿನ ಐಸಿಐಸಿಐ ಬ್ಯಾಂಕ್‌ಗೆ ಕೋರ್ಟ್ ಆರ್ಡರ್ ಇದೆ ಎಂಬಂತೆ 18 ಮೇಲ್ ಕಳುಹಿಸಿದ್ದ. ಖಾತೆಯೊಂದರಲ್ಲಿ ಫ್ರೀಜ್ ಆಗಿದ್ದ ಹಣವನ್ನು ರಿಲೀಸ್ ಮಾಡಿ, ಮತ್ತೊಂದು ಖಾತೆಗೆ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಇದನ್ನು ನಂಬಿದ ಬ್ಯಾಂಕ್ ಮ್ಯಾನೇಜರ್ ಹಣ ರಿಲೀಸ್ ಮಾಡಿದ್ದರು.

ಆದರೆ ಕೆಲ ದಿನಗಳಲ್ಲೇ ವಂಚಕರ ಅಸಲಿಯತ್ತು ಬಯಲಾಗಿದೆ. ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರ ಕೈಗೆ ಇದೇ ರೀತಿ ಕೋರ್ಟ್ ಆರ್ಡರ್ ಬಂದಿದೆ. ಒಂದು ಮೈಸೂರು ಕೋರ್ಟ್ ಆರ್ಡರ್ ಆಗಿದ್ದರೆ, ಇನ್ನೊಂದು ಎಕಾನಮಿಕ್ಸ್ ಅಫೆನ್ಸ್. ಆದರೆ ಅದು ಮೈಸೂರು ಕೋರ್ಟ್ ಬರಲ್ಲ ಅಂತ ತನಿಖೆಗಿಳಿದಾಗ ಆರೋಪಿಗಳ ಅಸಲಿಯತ್ತು ಬಯಲಾಗಿದೆ.

ಇನ್ನೂ ತನಿಖೆ ಕೈಗೊಂಡ ಪೊಲೀಸರು ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆಯ ಜಾಡು ಹಿಡಿದು ದೆಹಲಿ ತಲುಪಿದರು. ಅಲ್ಲಿ ಅಭಿಮನ್ಯುವನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ಮಾಡಿದಾಗ ವಂಚನೆಯ ಅಸಲಿ ಕಹಾನಿ ಬಯಲಾಗಿದೆ. ಆರೋಪಿಗಳು ವಂಚಿಸಿದ್ದ ಹಣದಲ್ಲಿ ಐಷಾರಾಮಿ ಜೀವನ ನಡೆಸಿ, ಬಿಂದಾಸ್ ಆಗಿದ್ದರು ಎಂಬುದು ಕೂಡ ಗೊತ್ತಾಗಿದೆ.

ಸದ್ಯ ಪೊಲೀಸರು ಮೂವರು ಆಸಾಮಿಗಳನ್ನು ಬಂಧಿಸಿ, ವಂಚಕರ ಖಾತೆಯಲ್ಲಿದ್ದ 63 ಲಕ್ಷ ರೂ.ಯನ್ನು ಫ್ರೀಜ್ ಮಾಡಿದ್ದಾರೆ. ಇನ್ನೂ ಈ ಜಾಲದ ಹಿಂದೆ ಬೇರೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆಯೂ ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: ಧಾರವಾಡದಲ್ಲಿ ಗಾಳಿ ಸಹಿತ ಮಳೆ – ಆಂಜನೇಯ ದೇವಸ್ಥಾನದ ಮೇಲೆ ಬಿದ್ದ ಮರ

Share This Article