ಚಿಕ್ಕಮಗಳೂರು: ಏಳು ದಶಕಗಳ ಬಳಿಕ ಜಲ್ಲಿ-ಟಾರ್ ಕಾಣುವ ಭಾಗ್ಯ ಕಂಡಿದ್ದ ರಸ್ತೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು (Forest Department) ಈ ಜಾಗ ನಮ್ದು ಅಂತ ರಸ್ತೆ ಮಧ್ಯೆಯೇ ಬೇಲಿ ಹಾಕಿರುವ ಘಟನೆ ಚಿಕ್ಕಮಗಳೂರು (Chikkamgaluru) ಜಿಲ್ಲೆ ಕಳಸ (Kalasa) ತಾಲೂಕಿನ ನಾಗಲಮಕ್ಕಿ ಗ್ರಾಮದಲ್ಲಿ ನಡೆದಿದೆ.
ಕಳಸ-ಇಡಕಣಿ ಮಾರ್ಗದ ನಾಗಲಮಕ್ಕಿಯ ಈ ರಸ್ತೆಯನ್ನ (Road) ನಂಬಿಕೊಂಡು ಕಾಫಿ ಎಸ್ಟೇಟ್ ಸೇರಿದಂತೆ ಹಲವು ಹಳ್ಳಿಗಳು ಸೇರಿ 250ಕ್ಕೂ ಹೆಚ್ಚು ಮನೆಗಳಿವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ರಸ್ತೆ ಜಲ್ಲಿ-ಟಾರ್ ನೋಡುವ ಭಾಗ್ಯ ಕಂಡಿರಲಿಲ್ಲ. ಆದರೆ ಈಗ ಸರ್ಕಾರ 4-5 ಕಿ.ಮೀ. ಕಾಂಕ್ರೀಟ್ ರಸ್ತೆಗೆ (Concrete Road) ಅನುಮೋದನೆ ನೀಡಿತ್ತು. ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ವಕ್ಫ್ ಅಧ್ಯಕ್ಷ ಸ್ಥಾನಕ್ಕೆ ಜಟಾಪಟಿ – ಅಧ್ಯಕ್ಷರಾಗಿ ಸೈಯದ್ ಹುಸೈನಿ ಆಯ್ಕೆ
ಅನುಮೋದನೆ ಸಿಕ್ಕಿದ ನಂತರ ಗುತ್ತಿಗೆದಾರರು ಕೆಲಸ ಕೂಡ ಆರಂಭಿಸಿದ್ದರು. ಆದರೆ ಅರಣ್ಯ ಅಧಿಕಾರಿಗಳು ಈ ಜಾಗ ನಮ್ಮದು ಎಂದು ನಡು ರಸ್ತೆಗೆ ಬೇಲಿ ಹಾಕಿದ್ದು ರಸ್ತೆ ಕಾಮಗಾರಿ ಕೆಲಸ ಕೂಡ ಸ್ಥಗಿತಗೊಂಡಿದೆ. ಎರಡು ಚರಂಡಿಗಳಲ್ಲಿ ಒಂದು ಚರಂಡಿಯನ್ನ ಮುಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 200 ಮೀಟರ್ ರಸ್ತೆ ಮಧ್ಯೆ ಬೇಲಿ ಹಾಕಿದ್ದಾರೆ. ಇದರಿಂದ ಕಂಟ್ರಾಕ್ಟರ್ ಕೆಲಸ ಕೂಡ ನಿಲ್ಲಿಸಿದ್ದಾರೆ.
75 ವರ್ಷಗಳಿಂದ ರಸ್ತೆ ನೋಡದ ಜನ ರಸ್ತೆಯಾಗಲಿದೆ ಎಂಬು ಖುಷಿಯಲ್ಲಿದ್ದರು. ಈಗ ಅರಣ್ಯ ಅಧಿಕಾರಿಗಳು ಹಳ್ಳಿಗರ ಆಸೆಗೆ ತಣ್ಣೀರೆರಚಿದ್ದಾರೆ. ಜನನಾಯಕರು, ಅಧಿಕಾರಿಗಳ ವಿರುದ್ಧ ಹೋರಾಡಿ, ಕಾಡಿ-ಬೇಡಿ ರಸ್ತೆ ಮಂಜೂರು ಮಾಡಿಸಿಕೊಂಡಿದ್ದರು.
ಈಗ ರಸ್ತೆ ಮಧ್ಯೆ ಬೇಲಿ ಹಾಕಿದ್ದರಿಂದ ಗುತ್ತಿಗೆದಾರ ಕೆಲಸ ನಿಲ್ಲಿಸಿದರೆ ಇತ್ತ ಕಾಡಂಚಿನ ಕುಗ್ರಾಮದ ಜನ ಮತ್ತೆ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಹೋರಾಡಲು ಶಕ್ತಿ ಇಲ್ಲದೆ ಅಸಹಾಯಕರಾಗಿದ್ದಾರೆ.