– ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ಮುಚ್ಚದಂತೆ ಕ್ರಮವಹಿಸಿ ಎಂದು ಸರ್ಕಾರಕ್ಕೆ ಸಲಹೆ
ಮಂಡ್ಯ: ಖಾಸಗಿ ಶಾಲೆಗಳು, ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಅನುಮತಿ ನೀಡುವುದನ್ನು ಸರ್ಕಾರ ನಿಲ್ಲಿಸಬೇಕು. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು ಎಂದು ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು ಚನ್ನಬಸಪ್ಪ ಹಕ್ಕೊತ್ತಾಯ ಮಂಡಿಸಿದರು.ಇದನ್ನೂ ಓದಿ: ಮಂದಿರ-ಮಸೀದಿ ವಿವಾದ ಹೆಚ್ಚಳಕ್ಕೆ RSS ಕಳವಳ; ಇದು ಒಪ್ಪಲಾಗದು ಎಂದ ಮೋಹನ್ ಭಾಗವತ್
ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ ಶತಮಾನ ಪೂರೈಸಿದೆ. 87ನೇ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಸಂತಸವಾಗಿದೆ. ಮಂಡ್ಯ ಜಿಲ್ಲೆ ರಾಜಕೀಯವಾಗಿ ಜಾಗೃತವಾಗಿರುವ ಹಾಗೂ ಸೌಹಾರ್ದತೆ ಉಳಿಸಿಕೊಂಡಿರುವ ಜಿಲ್ಲೆಯಾಗಿದೆ. ಆರ್ಥಿಕವಾಗಿ ಸಮೃದ್ದವಾಗಿದ್ದು, ಸಾಂಸ್ಕೃತಿಕವಾಗಿ ಶ್ರೀಮಂತವಾಗಿ, ಸಾಹಿತ್ಯಕವಾಗಿ ಹೆಸರು ಮಾಡಿರುವ ಜಿಲ್ಲೆಯಾಗಿದೆ. ರಾಜಕೀಯ, ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದೆ. ಮಂಡ್ಯದಲ್ಲಿ ಅನ್ಯ ಭಾಷಿಗರ ಪ್ರಮಾಣ, ಪ್ರಭಾವ ಬಹಳ ಕಡಿಮೆಯಿದೆ. ಸಮ್ಮೇಳನ ಅಧ್ಯಕ್ಷತೆಗೆ ನಾನು ಅರ್ಹನೋ ಎಂಬುವುದು ಗೊತ್ತಿಲ್ಲ. ಅನಿರೀಕ್ಷವಾಗಿ ಬಂದ ಅವಕಾಶವನ್ನು ಹಿಂಜರಿಕೆಯಿಲ್ಲದೆ ನಿರ್ವಹಿಸಿದ್ದೇನೆ. ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದೀರಿ ಎಂದಾಗ ನಾನೇ ಬೆರಗಾಗಿ ಹೋಗಿದ್ದೆ. ಇಷ್ಟು ವಯಸ್ಸಾದವರನ್ನು ಎಂದೂ ಸಮ್ಮೇಳನಾಧ್ಯಕ್ಷರಾಗಿ ಮಾಡಿಲ್ಲ. ಗಡುವು ತೀರಿದ ನನ್ನನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದ್ದಾರೆ. ಅವಕಾಶ ಕೊಟ್ಟ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನಿಟ್ಟು ಮಾತನಾಡಿದ ಅವರು, ಕನ್ನಡ ಭಾಷೆ ಸಮೃದ್ಧ, ಶ್ರೀಮಂತವಾಗಿ ಬೆಳೆಯುತ್ತಿದೆ. ಕನ್ನಡ ವಿಸ್ತಾರವಾಗುತ್ತಿದೆ, ಆದರೆ ಬಳಕೆ ಆಗುತ್ತಿಲ್ಲ. ಬಳಸಿದಷ್ಟು ನಮ್ಮ ಕನ್ನಡ ಭಾಷೆ ಬೆಳೆಯುತ್ತದೆ. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಇರಬೇಕು. ನಾಡಿನ ಪ್ರತಿ ಮಕ್ಕಳಿಗೆ ಶಿಕ್ಷಣ ದೊರಕಿಸಲು ಕ್ರಮವಹಿಸಬೇಕು. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಖಾಸಗಿ ಶಾಲೆಗಳಿಗೆ ಆಂಗ್ಲ ಮಾಧ್ಯಮ ತೆರೆಯಲು ಅನುಮತಿಗೆ ಸರ್ಕಾರ ತಡೆ ನೀಡಬೇಕು. ಗ್ರಾಮೀಣ ಭಾಗದ ಶಾಲೆಗಳಿಗೆ ಸೂರುಗಳು ಇಲ್ಲವಾಗಿದೆ. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಕನ್ನಡ ಸರ್ಕಾರಿ ಶಾಲೆ ಮುಚ್ಚಲಾಗುತ್ತಿದೆ. ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ಮುಚ್ಚದಂತೆ ಸರ್ಕಾರ ಕ್ರಮವಹಿಸಬೇಕು. ಭಾರತಕ್ಕೆ ಮಾದರಿಯಾಗುವ ಶಿಕ್ಷಣ ಕ್ರಮವನ್ನು ಜಾರಿ ಮಾಡಬೇಕು. ಆಗ ಸಮಾನ ಶಿಕ್ಷಣ ದೊರೆಯುತ್ತದೆ ಎಂದು ಸಲಹೆ ನೀಡಿದರು.ಇದನ್ನೂ ಓದಿ: ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನ ಮಂಡ್ಯ ಜನರದ್ದು – ಸಿಎಂ