ಮಡಿಕೇರಿ: ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಕೊಟ್ಟು ಆಪರೇಷನ್ ಕಮಲ ಮಾಡುವುದಾದರೆ 40 ಶಾಸಕರಿಗೆ ಸುಮಾರು 2,000 ಕೋಟಿ ರೂ. ಹಣ ಬೇಕು. ಸಿಎಂ ಸಿದ್ದರಾಮಯ್ಯ (Siddaramaiah) ಈಗಲೇ ಎಸ್ಐಟಿಗೆ ಅಥವಾ ಲೋಕಾಯುಕ್ತಕ್ಕೆ ಹೇಳಿ ಹಣ ಸೀಜ್ ಮಾಡಿಸುವುದು ಉತ್ತಮ ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ (Appachu Ranjan) ಲೇವಡಿ ಮಾಡಿದ್ದಾರೆ.
ಮಡಿಕೇರಿಯ (Madikeri) ಮಕ್ಕಂದೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ನಮ್ಮ ಶಾಸಕರಿಗೆ 50 ಕೋಟಿ ರೂ. ಕೊಟ್ಟು ಆಪರೇಷನ್ ಕಮಲ ಮಾಡಲು ಹೊರಟಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದರು. ಸುಮ್ಮನೆ ಬಾಯಿಯ ಚಪಲಕ್ಕೆ ಹೇಳುವುದು ಒಳ್ಳೆಯದಲ್ಲ. ಮೈಸೂರಿನ ಮುಡಾದಲ್ಲಿ 14 ಸೈಟ್ ದುರುಪಯೋಗ ಆಗಿರುವುದನ್ನು ನೋಡಿ ವಿಚಲಿತರಾಗಿ ಅವರು ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈಗಾಗಲೇ ನನ್ನನ್ನು ಮುಟ್ಟಿದರೆ ರಾಜ್ಯದ ಜನರು ಬೀಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಸಿಎಂ ಬದಲಾವಣೆ ಅಗುವುದು ಗೊತ್ತಿದೆ ಹೀಗಾಗಿ ಹೈಕಮಾಂಡ್ಗೆ ಅವರು ಕೊಟ್ಟ ಉತ್ತರ ಅದು ಎಂದಿದ್ದಾರೆ.
ನಮ್ಮವರು ಯಾರು ಆಪರೇಷನ್ ಕಮಲ ಮಾಡುವ ಹಂತಕ್ಕೆ ಹೋಗಲ್ಲ. 136 ಸೀಟ್ ಇರುವಾಗ ಯಾರು ಆಪರೇಷನ್ ಮಾಡಲು ಹೋಗಲ್ಲ. ಅವರ ಪಾಡಿಗೆ ಅವರೇ ಬೀಳುವ ಪರಿಸ್ಥಿತಿಯಲ್ಲಿ ಇದ್ದಾರೆ. ನಾವು ಯಾಕೆ ಅವರನ್ನು ಕೊಂಡುಕೊಳ್ಳಬೇಕು? ಅಲ್ಪಸ್ವಲ್ಪ ಇದ್ದಿದ್ದರೆ ಬಂದು ಬಿಡಿ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಆಪರೇಷನ್ ಮಾಡಬಹುದಾಗಿತ್ತು. ಮೊದಲು ನಮ್ಮ ಪಕ್ಷಕ್ಕೆ ಬಂದವರು ಉಂಡು ಹೋದ ಕೊಂಡು ಹೋದ ಕೆಲಸ ಮಾಡಿದ್ದನ್ನು ನೋಡಿದ್ದೇವೆ. ಸಿ.ಪಿ ಯೋಗೇಶ್ವರ್ ಮಂತ್ರಿಯಾಗಿದ್ದರು, ಉಂಡು ಹೋದ್ರು ಕೊಂಡು ಹೋದ್ರು. ಈಗ ಸೋಲುವ ಭೀತಿ ಎದುರಾಗಿದೆ. ಜಮೀರ್ ಅಹಮದ್ಗೆ ನಿಜವಾಗಿಯೂ ಥ್ಯಾಂಕ್ಸ್ ಹೇಳಬೇಕು ಎಂದಿದ್ದಾರೆ.
ಇನ್ನೂ ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಸರ್ಕಾರ ಡಮಾರ್ ಅಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.