ಪತ್ನಿ, ಮಗುವನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಕಾರ್ತಿಕ್ ಸಾಲದ ಸುಳಿಗೆ ಇಡೀ ಸಂಸಾರ ಬಲಿ?

Public TV
2 Min Read
Mangaluru Pakshikere Husband kills wife and child

– ಕಾರ್ತಿಕ್ ಭಟ್ ವಿರುದ್ಧ ಚಿನ್ನ ಎಗರಿಸಿದ ಆರೋಪ

ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಕ್ಷಿಕೆರೆ ಜೋಡಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಪತ್ನಿ ಹಾಗೂ ಮಗುವನ್ನ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದ ಕಾರ್ತಿಕ್ ಭಟ್ (Karthik Bhat) ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದೆ. ವಿಪರೀತ ಸಾಲದ ಸುಳಿಯಿಂದ ಬಳಲಿದ್ದ ಕಾರ್ತಿಕ್ ಭಟ್, ತನ್ನ ಸಂಸಾರದೊಂದಿಗೆ ಅನೇಕರನ್ನೂ ಸಮಸ್ಯೆಗೆ ಸಿಲುಕಿಸಿದ್ದ ಎಂಬ ವಿಚಾರ ತಿಳಿದುಬಂದಿದೆ.

ನ.9 ರ ಶನಿವಾರದಂದು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಮಂಗಳೂರಿನ (Mangaluru) ಮುಲ್ಕಿ ಸಮೀಪದ ಪಕ್ಷಿಕೆರೆಯಲ್ಲಿ ಸುಂದರ ಸಂಸಾರವೊಂದು ಭೀಕರ ಅಂತ್ಯ ಕಂಡಿತ್ತು. ಕಾರ್ತಿಕ್ ಭಟ್ ಎಂಬಾತ ತನ್ನ ಪತ್ನಿ ಹಾಗೂ ನಾಲ್ಕು ವರ್ಷದ ಮಗುವನ್ನ ಕಿಟಕಿ ಗಾಜಿನಿಂದ ತಿವಿದು ಕೊಂದು ಬಳಿಕ ತಾನು ರೈಲಿಗೆ ತಲೆ ಕೊಟ್ಟು ಭೀಕರವಾಗಿ ಸಾವನ್ನಪ್ಪಿದ್ದ. ಈ ಪ್ರಕರಣದ ಸುತ್ತ ಅನುಮಾನಗಳ ಹುತ್ತವೇ ಇದೆ. ಅನೇಕ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಭಟ್ ಹಾಗೂ ಅಕ್ಕ ಕಣ್ಮಣಿ ಕಂಬಿ ಎಣಿಸುತ್ತಿದ್ದಾರೆ. ಈ ನಡುವೆ ಕಾರ್ತಿಕ್ ವಿರುದ್ಧ ಸಾಲು ಸಾಲು ಅವ್ಯವಹಾರಗಳ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: Mangaluru| ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣ- ಇಬ್ಬರ ಬಂಧನ

Mangaluru Pakishikere Husband Kills Wife And Child

ಕಾರ್ತಿಕ್ ಭಟ್ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದೆ. ಪಕ್ಷಿಕೆರೆ ನಿವಾಸಿ ಮಹಮ್ಮದ್ ಎಂಬುವವರ 80 ಗ್ರಾಂ ಚಿನ್ನವನ್ನ ಕಾರ್ತಿಕ್ ಎಗರಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಚಿನ್ನ ಅಡವಿಟ್ಟು ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಕಾರ್ತಿಕ್ ನನಗೆ ಮೋಸ ಮಾಡಿದ್ದಾನೆ ಎಂದು ಮಹಮ್ಮದ್ ಆರೋಪಿಸಿದ್ದಾರೆ.

ಎರಡು ವರ್ಷದ ಹಿಂದೆ ಪಕ್ಷಿಕೆರೆ ಬ್ಯಾಂಕ್‌ವೊಂದರಲ್ಲಿ ತನ್ನ 80 ಗ್ರಾಂ ಚಿನ್ನವನ್ನು ಅಡವಿಟ್ಟು ಮಹಮ್ಮದ್ 1,60,000 ಸಾಲ ಪಡೆದಿದ್ದ. ಅವರಿಗೆ ಇನ್ನೂ ಹೆಚ್ಚಿನ ಸಾಲ ಬೇಕೆಂಬುದನ್ನು ಮನಗಂಡು ಕಾರ್ತಿಕ್ ತಾನು ಮ್ಯಾನೇಜರ್ ಆಗಿರುವ ಸುಬ್ರಹ್ಮಣ್ಯ  ಸಹಕಾರಿ ಸಂಘದಲ್ಲಿ ಅಡವಿಟ್ಟರೆ ಹೆಚ್ಚಿನ ಸಾಲ ನೀಡುವುದಾಗಿ ಭರವಸೆ ನೀಡಿದ್ದ. ಹೆಚ್ಚಿನ ಸಾಲದ ಅಗತ್ಯತೆಯಿಂದ ಮಹಮ್ಮದ್, ಕಾರ್ತಿಕ್ ಮಾತನ್ನ ನಂಬಿ ಪಕ್ಷಿಕೆರೆ ಬ್ಯಾಂಕ್‌ನಲ್ಲಿ ಚಿನ್ನ ಅಡವಿಡುತ್ತಾರೆ. ಆ ಬಳಿಕ 3,04,000 ರೂ. ಸಾಲವನ್ನೂ ಪಡೆಯುತ್ತಾರೆ. ಆ ಬಳಿಕ ವೈಯುಕ್ತಿಕ ಸಮಸ್ಯೆಯಿಂದ ಮಹಮ್ಮದ್ ಆ ಊರಲ್ಲಿ ಇರದ ಕಾರಣ ಬ್ಯಾಂಕ್‌ಗೆ ಸರಿಯಾಗಿ ಭೇಟಿ ನೀಡೋದಿಲ್ಲ. ಆದರೆ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಸಂಶಯಗೊಂಡ ಮಹಮ್ಮದ್, ಬ್ಯಾಂಕ್‌ನಲ್ಲಿ ತಾವು ಅಡವಿಟ್ಟ ಚಿನ್ನದ ಬಗ್ಗೆ ವಿಚಾರಿಸುತ್ತಾರೆ. ಆದರೆ ಆವಾಗ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬರುತ್ತೆ. ಚಿನ್ನ ಅಡವಿಟ್ಟ 4 ತಿಂಗಳಲ್ಲೇ ಅಡವಿಟ್ಟ ಬಂಗಾರ ಬಿಡಿಸಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ವಿವರ ನೀಡಿದ್ದಾರೆ. ಕಾರ್ತಿಕ್ ಭಟ್ ಈ ಬಂಗಾರದ ಒಡವೆಗಳನ್ನು ಅಲ್ಲಿಂದ ಎಗರಿಸಿ ಅದರ ಮೂಲ ಬೆಲೆಗೆ ಮಾರಿದ್ದಾನೆ ಎಂದು ಬಂಗಾರದ ಒಡವೆ ಕಳೆದುಕೊಂಡ ಮಹಮ್ಮದ್ ಆರೋಪಿಸಿದ್ದಾರೆ. ಇದನ್ನೂ ಓದಿ: Mangaluru| ಪತ್ನಿ, ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಕಾರ್ತಿಕ್ ಭಟ್ ವಿರುದ್ಧ ಕೇಳಿ ಬಂದಿರುವ ಈ ವಂಚನೆ ಆರೋಪದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಅನೇಕ ಜನರು ಕಾರ್ತಿಕ್ ಭಟ್‌ನಿಂದ ವಂಚನೆಗೆ ಒಳಗಾಗಿದ್ದೇವೆ ಎಂದು ಆರೋಪಿಸುತ್ತಿದ್ದಾರೆ.

Share This Article