ಬೆಂಗಳೂರಿನಲ್ಲಿ ಮತ್ತೊಂದು ಡೇಂಜರ್ ಬಿಲ್ಡಿಂಗ್‌ – ಕುಸಿಯುವ ಆತಂಕದಲ್ಲಿ ಜನ!

Public TV
1 Min Read
Building crack in bengaluru

– ಕಟ್ಟಡ ನೆಲಸಮಕ್ಕೆ ಬಿಬಿಎಂಪಿ ಸೂಚನೆ

ಬೆಂಗಳೂರು: ಬಾಬುಸಾಪಾಳ್ಯ ಔಟರ್‌ರಿಂಗ್ ರೋಡ್‌ನ ಹೊರಮಾವು ನಂಜಪ್ಪ ಗಾರ್ಡನ್‌ನಲ್ಲಿರುವ ಮತ್ತೊಂದು ಕಟ್ಟಡ ಬಿರುಕು ಬಿಟ್ಟಿದ್ದು ಕುಸಿಯುವ ಹಂತ ತಲುಪಿದೆ. ಇದರಿಂದ ಸುತ್ತಮುತ್ತಲಿನ ಜನ ಆತಂಕಕ್ಕೆ ಒಳಗಾಗಿದ್ದಾರೆ.

ನಗರದಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಎರಡು ದಿನಗಳ ಹಿಂದೆಯಷ್ಟೇ ಬಾಬುಸಾಪಾಳ್ಯದ ಕಟ್ಟಡವೊಂದು ಬುಡಮೇಲಾಗಿ ಉರುಳಿತ್ತು. ಇದೀಗ ನಿರ್ಮಾಣ ಹಂತದಲ್ಲಿರುವ 6 ಅಂತಸ್ತಿನ ಕಟ್ಟಡ ಬಿರುಕು ಬಿಟ್ಟಿದ್ದು, ಕೊಂಚ ವಾಲಿದಂತೆ ಕಾಣುತ್ತಿದೆ. ಪುಟ್ಟಪ್ಪ ಎಂಬುವರಿಗೆ ಈ ಕಟ್ಟಡ ಸೇರಿದ್ದು, ಈಗಾಗಲೇ ಕಟ್ಟಡ ತೆರವಿಗಾಗಿ ಬಿಬಿಎಂಪಿ ಅಧಿಕಾರಿಗಳಿಂದ ಸೂಚನೆಯನ್ನು ನೀಡಲಾಗಿದೆ.ಇದನ್ನೂ ಓದಿ: ಕೊನೆಗೂ ಅಲ್ಪಸಂಖ್ಯಾತ ಅಭ್ಯರ್ಥಿಗೆ ಶಿಗ್ಗಾಂವಿ ಟಿಕೆಟ್‌ ನೀಡಿದ ಕಾಂಗ್ರೆಸ್‌

ನಂಜಪ್ಪ ವಾರ್ಡ್ನ ಸರ್ವೇ ನಂಬರ್ 54/1ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಸೆ.20 ರಂದು ಕಟ್ಟಡ ತೆರವಿಗಾಗಿ ಬಿಬಿಎಂಪಿಯಿAದ ನೋಟಿಸ್ ನೀಡಲಾಗಿತ್ತು. ಅ.14 ರಂದು ತೆರವಿಗಾಗಿ ಉತ್ತರ ನೀಡಿದ್ದ ಮಾಲೀಕ ಅ.24 ರಂದು ಅಂದರೆ ಇಂದು ತೆರವುಗೊಳಿಸುವುದಾಗಿ ತಿಳಿಸಿದ್ದರು. ಜೊತೆಗೆ ತಮ್ಮ ಸ್ವಂತ ಹಣದಲ್ಲಿ ಕಟ್ಟಡವನ್ನು ತೆರವುಗೊಳಿಸುವುದಾಗಿ ತಿಳಿಸಿದ್ದರು. ನೆಲಮಹಡಿ ಸೇರಿದಂತೆ ಒಟ್ಟು 6 ಅಂತಸ್ತಿನ ಮಹಡಿಯ ಮನೆಯನ್ನು ಉರುಳಿಬಿದ್ದ ಕಟ್ಟಡದಂತೆಯೇ ಕಟ್ಟಿಸಲಾಗಿತ್ತು. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ನಿರ್ಮಾಣದ ಯಾವುದೇ ನಿಯಮಗಳನ್ನು ಪಾಲಿಸಿರಲಿಲ್ಲ. ಮಂಜೂರಾತಿ ನಕ್ಷೆ, ನಡು ಜಾಗಗಳನ್ನು ಬಿಡದೇ ಕಟ್ಟಡವನ್ನು ಕಟ್ಟಿಸಿದ್ದರು.

ಕಟ್ಟಡ ಈಗಾಗಲೇ ಕೆಲವು ಕಡೆ ಬಿರುಕು ಬಿಟ್ಟಿದ್ದು, ಇಂದಿನಿಂದಲೇ ತೆರವು ಕಾರ್ಯ ಆರಂಭಿಸಲಾಗಿದೆ. ಕಟ್ಟಡದ ಅಕ್ಕಪಕ್ಕ ಇದ್ದ ಮೂರ್ನಾಲ್ಕು ಕುಟುಂಬಗಳನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿದೆ.

ಒಟ್ಟು ಎರಡು ಕಟ್ಟಡಗಳು ಬಿರುಕು ಬಿಟ್ಟಿದ್ದು, ಬಿಬಿಎಂಪಿ (BBMP) ಎಂಜಿನಿಯರ್ಸ್ ಪರಿಶೀಲನೆ ಮಾಡುತ್ತಿದ್ದಾರೆ. ಒಂದು ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲಿದೆ. ಇನ್ನೊಂದು ಕಂಪ್ಲೀಟ್ ಆಗಿದೆ. ಪರಿಶೀಲನೆ ನಂತರ ನೋಟೀಸ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಬಿಬಿಎಂಪಿ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 16.17 ಕೋಟಿ ಆಸ್ತಿ ಒಡೆಯ; ಆದ್ರೂ ಸ್ವಂತ ಕಾರು ಇಲ್ಲ!

Share This Article