ಬಳ್ಳಾರಿ: ಅಪಘಾತ ಮಾಡಿ ಪರಾರಿಯಾದ ಆರೋಪಿಯನ್ನು ಹಿಡಿಯೋದು ಪೊಲೀಸರ ಕರ್ತವ್ಯ. ಆದ್ರೆ ಅಪಘಾತ ಮಾಡಿದ ಪೊಲೀಸ್ ಅಧಿಕಾರಿಯ ಪುತ್ರಿಯನ್ನು ಪೊಲೀಸರೇ ಸ್ಥಳದಿಂದ ಕಳಿಸಿಕೊಟ್ಟು ರಕ್ಷಣೆ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಅಫಘಾತದಲ್ಲಿ ಗಾಯಗೊಂಡವನ ದೃಶ್ಯಗಳನ್ನು ಸೆರೆಹಿಡಿದ ಪತ್ರಕರ್ತರ ಮೊಬೈಲ್ಗಳನ್ನ ಕಸಿಯಲು ಪೊಲೀಸರು ಯತ್ನಿಸಿದ ಘಟನೆಯೂ ನಡೆದಿದೆ.
ಬಳ್ಳಾರಿಯ ಕಾಸ್ಮೋಪಾಲಿಟಿನ್ ಕ್ಲಬ್ ಬಳಿ ಕಳೆದ ರಾತ್ರಿ ಡಿವೈಎಸ್ಪಿಯೊಬ್ಬರ ಪುತ್ರಿಯ ಕೆಎ34ಎಕ್ಸ್4601 ನೋಂದಣಿ ಸಂಖ್ಯೆ ಹೊಂದಿರುವ ಸ್ಕೂಟಿ ನಿಯಂತ್ರಣ ಕಳೆದುಕೊಂಡು ಬಾಷಾ ಎಂಬಾತನಿಗೆ ಡಿಕ್ಕಿ ಹೊಡೆದಿದೆ. ಈ ವಿಚಾರ ತಿಳಿದ ತಕ್ಷಣವೇ ಪತ್ರಕರ್ತರು ಸ್ಥಳಕ್ಕೆ ತೆರಳಿ ದೃಶ್ಯಗಳನ್ನು ಸೆರೆಹಿಡಿಯಲು ಮುಂದಾದ್ರು. ಈ ವೇಳೆ ಗಾಯಾಳುವನ್ನು ಪೊಲೀಸರು ತರಾತುರಿಯಲ್ಲಿ ಆಟೋದಲ್ಲಿ ಕರೆದೊಯ್ದರು. ಪತ್ರಕರ್ತರ ಮೊಬೈಲ್ಗಳನ್ನು ಕಸಿದು ಸೆರೆಯಾದ ದೃಶ್ಯಗಳನ್ನು ಡಿಲೀಟ್ ಮಾಡಲು ಯತ್ನಿಸಿದ್ರು. ಮಾತ್ರವಲ್ಲದೇ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ರು.
ಪೊಲೀಸರ ಈ ದೌರ್ಜನ್ಯವನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದ ಪೊಲೀಸರು ಮೊಬೈಲ್ ಕಸಿದು ದೃಶ್ಯಗಳನ್ನ ಬಲವಂತವಾಗಿ ಡಿಲೀಟ್ ಮಾಡಿದ್ರು. ಒಮ್ಮೆ ತಾನು ಜೀನ್ಸ್ ಕಾರ್ಖಾನೆಯ ಕಾರ್ಮಿಕ ಎನ್ನುವ ಗಾಯಾಳು ಮತ್ತೊಮ್ಮೆ ಡಿವೈಎಸ್ಪಿ ಮನೆಯಲ್ಲಿ ಕೆಲಸಕ್ಕಿರೋದಾಗಿ ಹೇಳ್ತಿದ್ದಾನೆ. ಇದೀಗ ಈತನ ಹೇಳಿಕೆಗಳು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.