ನವದೆಹಲಿ: ಕೇಂದ್ರ ಸಚಿವರಾಗಿ ನೇಮಕಗೊಂಡಿರುವ ರಾಜ್ಯದ ಸಂಸದರಾದ ಹೆಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ (Pralhad Joshi), ವಿ.ಸೋಮಣ್ಣ (V Somanna) ಹಾಗೂ ಶೋಭಾ ಕರಂದ್ಲಾಜೆಯವರು (Shobha Karandlaje) ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಂಸತ್ ಭವನದಲ್ಲಿ ನಡೆಯುತ್ತಿರುವ 18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ನೂತನ ಸಂಸದರಿಗೆ ಹಂಗಾಮಿ ಸ್ಪೀಕರ್ ಭತೃಹರಿ ಮಹತಾಬ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಮೂವರು ನೂತನ ಸಂಸದರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿರುವ ಸೋಮಣ್ಣ ಅವರು, ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮೆಟ್ಟಿಲುಗಳಿಗೆ ನಮಸ್ಕರಿಸಿ ಸಂಸತ್ ಪ್ರವೇಶಿಸಿದರು. ಇದನ್ನೂ ಓದಿ: ಸಂಸತ್ ಅಧಿವೇಶನಕ್ಕೂ ಮುನ್ನ ವಯನಾಡ್ ಜನತೆಗೆ ರಾಗಾ ಭಾವನಾತ್ಮಕ ಪತ್ರ
ಹೆಚ್.ಡಿ ಕುಮಾರಸ್ವಾಮಿಯವರಿಗೆ (ಮಂಡ್ಯ) ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ, ಪ್ರಹ್ಲಾದ್ ಜೋಶಿಯವರಿಗೆ (ಧಾರವಾಡ) ಕಲ್ಲಿದ್ದಲು ಮತ್ತು ಗಣಿ ಹಾಗೂ ರೈಲ್ವೇ ಇಲಾಖೆಯನ್ನು ವಿ.ಸೋಮಣ್ಣ (ತುಮಕೂರು) ಅವರಿಗೆ ನೀಡಲಾಗಿದೆ. ಶೋಭಾ ಕರಂದ್ಲಾಜೆಯವರು (ಬೆಂಗಳೂರು ಉತ್ತರ) ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಪರಿಷತ್ ನೂತನ ಸದಸ್ಯರಾಗಿ 17 ಜನ ಪ್ರಮಾಣ ವಚನ ಸ್ವೀಕಾರ – ಸಿಎಂ ಕಾಲಿಗೆ ನಮಸ್ಕರಿಸಿದ ಸಿ.ಟಿ ರವಿ