ಚಿತ್ರೀಕರಣ ಸ್ಥಳದಲ್ಲಿ ಗಲಾಟೆ, ಗದ್ದಲ ಆಗೋದು ಸಾಮಾನ್ಯ. ಅಂತಹ ಸನ್ನಿವೇಶದಲ್ಲಿ ಸಂಧಾನ ಸಭೆಗಳು, ಮಾತುಕಥೆಗಳ ಮೂಲಕ ಸಮಸ್ಯೆ ಬಗೆಹರಿಸಲಾಗುತ್ತದೆ. ಆದರೆ, ಇಲ್ಲಿ ಅಂತಹ ಸನ್ನಿವೇಶವೇ ಉದ್ಭವಿಸಿಲ್ಲ. ನಿರ್ಮಾಪಕರು ನೇರವಾಗಿ ತಮ್ಮ ಧಾರಾವಾಹಿಯ ನಟ, ನಟಿಯರಿಗೆ ಗೇಟ್ ಪಾಸ್ ಕೊಟ್ಟು, ಅಲ್ಲಿಂದ ಕಳುಹಿಸಿದ್ದಾರೆ.
ಹಿಂದಿಯ ಜನಪ್ರಿಯ ಧಾರಾವಾಹಿ ಯೆ ರಿಶ್ತಾ ಕ್ಯಾ ಕೆಹ್ಲಾತಾ ಹೈ ಧಾರಾವಾಹಿಯ ನಟ ನಟಿಯರಾದ ಶೆಹಜಾದಾ ಮತ್ತು ಪ್ರತೀಕ್ಷಾ ಅವರನ್ನು ಚಿತ್ರೀಕರಣದ ಸ್ಥಳದಿಂದಲೇ ಧಾರಾವಾಹಿ ನಿರ್ಮಾಪಕ ರಾಜನ್ ಶಾಹಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಈ ನಟರು ಅರ್ಮಾನ್ ಮತ್ತು ರೂಹಿ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.
ಅವರನ್ನು ಶೂಟಿಂಗ್ ಸೆಟ್ ನಿಂದ ಕಳುಹಿಸೋಕೆ ಕಾರಣ, ಇಬ್ಬರೂ ವೃತ್ತಿಪರರಾಗಿ ಇರಲಿಲ್ಲವೆಂದು ಆರೋಪಿಸಲಾಗಿದೆ. ಶೆಹಜಾದ್ ಚಿತ್ರೀಕರಣದಲ್ಲಿ ಕೆಲಸ ಮಾಡುವವರ ಮೇಲೆ ಹಲ್ಲೆ ಮಾಡಿದ್ದಾರಂತೆ. ಕೆಟ್ಟದ್ದಾಗಿ ನಡೆಸಿಕೊಂಡು, ದಬ್ಬಾಳಿಕೆ ಮಾಡುತ್ತಿದ್ದರು ಎನ್ನುವ ಆರೋಪವೂ ಇವರ ಮೇಲಿದೆ. ನಟಿಯು ನಿರ್ಮಾಪಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಹೊತ್ತಿದ್ದಾರೆ.