– ಇಂತಹ ಕಠಿಣ ಸಮಯದಲ್ಲಿ ಹೀಗೆ ಮಾಡೋದು ತಪ್ಪು
ಬೆಂಗಳೂರು: ಕಾಂಗ್ರೆಸ್ ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ಈಗ ಬಿಜೆಪಿ ಸೇರುತ್ತೇನೆ ಎಂದರೆ ಅದು ಸರಿಯಲ್ಲ ಅಂತ ಮಧ್ಯ ಪ್ರದೇಶದ ಮಾಜಿ ಸಿಎಂ ಕಮಲನಾಥ್ ವಿರುದ್ಧ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಕಿಡಿಕಾರಿದ್ದಾರೆ.
ಮಧ್ಯಪ್ರದೇಶ ದ ಮಾಜಿ ಸಿಎಂ ಕಮಲನಾಥ್ ಬಿಜೆಪಿ (BJP) ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಹಳ ಜನ ಕಾಂಗ್ರೆಸ್ ನಲ್ಲಿ ಅಧಿಕಾರ ಅನುಭವಿಸಿ, ಎಲ್ಲಾ ಹಂತದಲ್ಲಿ ಅವರಿಗೆ ಸಹಕಾರ ಕೊಟ್ಟು ಬೆಳೆಸಿರುತ್ತೆ. ಅಧಿಕಾರ ಅನುಭವಿಸಿ ಕ್ಲುಲ್ಲಕ ಕಾರಣಕ್ಕೋ, ನಿಜವಾದ ಕಾರಣಕ್ಕೋ ಪಕ್ಷವನ್ನು ಬಿಡೋದು ಸರಿಯಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ಗೆ ಇಂದಿರಾ ಗಾಂಧಿ 3ನೇ ಮಗ ಶಾಕ್? – ಪುತ್ರನ ಜೊತೆ ಕಮಲ್ನಾಥ್ ಬಿಜೆಪಿ ಸೇರ್ಪಡೆ?
ಪಕ್ಷ ನಮಗೆ ತಾಯಿ ಸಮಾನ. ತಾಯಿ ನಮಗೆ ಊಟ ಹಾಕಿ, ಬೆಳೆಸಿ ದೊಡ್ಡವರು ಮಾಡ್ತಾರೆ. ನಾವು ತಾಯಿಯನ್ನು ತಿರಸ್ಕಾರ ಮಾಡಿದ ಹಾಗೆ ಮಾಡೋದು ಸರಿಯಲ್ಲ. ಕಾಂಗ್ರೆಸ್ ಪಕ್ಷ ಅವರಿಗೆಲ್ಲ ದೊಡ್ಡ ದೊಡ್ಡ ಹುದ್ದೆ ಕೊಟ್ಟು ಅವರನ್ನ ಬೆಳೆಸಿದೆ. ಅವರು ಕೂಡಾ ಪಕ್ಷಕ್ಕೆ ದುಡಿದಿರಬಹುದು. ಅವರಿಂದ ಪಕ್ಷಕ್ಕೆ ಅನುಕೂಲ ಆಗಿರಬಹುದು. ಇಂತಹ ಕಠಿಣ ಸಮಯದಲ್ಲಿ, ಚುನಾವಣೆ ಬರೋ ಸಮಯದಲ್ಲಿ ಹೀಗೆ ಮಾಡೋದು ಸರಿಯಲ್ಲ ಎಂದರು.
ಕಮಲನಾಥ್ (Kamalnath) ಅಂತಹವರು ಮಧ್ಯಪ್ರದೇಶದಲ್ಲಿ ಚುನಾವಣೆ ಸರಿಯಾಗಿ ನಡೆಸಿಲ್ಲ ಅಂತ ನಮಗೆಲ್ಲ ಅನ್ನಿಸುತ್ತೆ. ಚುನಾವಣೆ ಮೊದಲು ಕಾಂಗ್ರೆಸ್ ಅಧಿಕಾರ ಬರುತ್ತೆ ಅಂತ ಹೇಳೋರು. ಆದರೆ ಕೆಟ್ಟ ಪರಿಸ್ಥಿತಿ ತಂದು ಸೋತಿದ್ದಾರೆ. ಇದಕ್ಕೆ ಕಮಲನಾಥ್ ಕಾರಣ ಅಂತ ವಿಶ್ಲೇಷಣೆ ಮಾಡ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪಕ್ಷ ನಮ್ಮನ್ನ ಸರಿಯಾಗಿ ನಡೆಸಿಕೊಂಡಿಲ್ಲ ಅಂತ ಅವರಿಗೆ ಅನ್ನಿಸಿರಬಹುದು. ತಪ್ಪು ಅವರಿಂದ ಆಗಿ ಕಾಂಗ್ರೆಸ್ ದೂಷಣೆ ಮಾಡೋದು ಸರಿಯಲ್ಲ. ಅವರು ಕಾಂಗ್ರೆಸ್ ಬಿಡಬಾರದು ಅಂತ ನಮಗೂ ಅನ್ನಿಸುತ್ತೆ ಎಂದರು.