ಭಾರೀ ವಿವಾದದ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾವನ್ನು ಓಟಿಟಿಯವರು ಕೇಳುತ್ತಿಲ್ಲ ಎನ್ನುವ ಸುದ್ದಿ ಹರಿದಾಡಿತ್ತು. ಸಿನಿಮಾ ಭರ್ಜರಿ ಕಲೆಕ್ಷನ್ (Collection) ಮಾಡುವಾಗಲೇ ಬಹುತೇಕ ಓಟಿಟಿಯವರು ಸಿನಿಮಾ ಟೀಮ್ ಹಿಂದೆ ಬೀಳುತ್ತಾರೆ. ಆದರೆ, ದಿ ಕೇರಳ ಸ್ಟೋರಿಯನ್ನು ಈವರೆಗೂ ಯಾರೂ ಕೇಳಿಲ್ಲವೆಂದು ಸ್ವತಃ ಸಿನಿಮಾ ಟೀಮ್ ಹೇಳಿಕೊಂಡಿತ್ತು.
ಸಿನಿಮಾ ರಿಲೀಸ್ ಆಗಿ ಒಂದೇ ವಾರಕ್ಕೆ, ಕೆಲವು ಸಿನಿಮಾಗಳು ಮೂರ್ನಾಲ್ಕು ವಾರಕ್ಕೆ ಓಟಿಟಿಯಲ್ಲಿ (OTT) ಬಂದಿದ್ದು ಇದೆ. ಈ ಹಿಂದೆ ರಿಲೀಸ್ ಆಗಿರುವ ದಿ ಕಾಶ್ಮೀರ ಫೈಲ್ಸ್ ಕೂಡ ಚಿತ್ರ ಬಿಡುಗಡೆಯಾಗಿ ಹಲವು ವಾರಗಳ ನಂತರ ಓಟಿಟಿಗೆ ಬಂದಿತ್ತು. ಆದರೆ, ಇಂಥದ್ದೊಂದು ಭಾಗ್ಯ ದಿ ಕೇರಳ ಸ್ಟೋರಿಗೆ ಇಲ್ಲ ಎನ್ನುವುದು ಚಿತ್ರತಂಡಕ್ಕೆ ಆಘಾತ ಮೂಡಿಸಿತ್ತು. ಇದೀಗ ಅವರ ನೋವು ನಿವಾರಣೆಯಾಗಿದೆ. ಫೆಬ್ರವರಿ 16ರಿಂದ ಜೀ 5 ಒಟಿಟಿ ವೇದಿಕೆಯಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.
ಈ ನಡುವೆ ಮತ್ತೊಂದು ಸುದ್ದಿ ಮಲಯಾಳಂ (Malayalam) ಸಿನಿಮಾ ರಂಗದಿಂದ ಬಂದಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಎರಡನೇ ಭಾಗವಾಗಿ ಮೂಡಿ ಬರಲಿದೆ ಎನ್ನುವ ಸುದ್ದಿ ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ (Sudeepto Sen) ಕೂಡ ಈ ಬಗ್ಗೆ ಮಾತನಾಡಿದ್ದಾರೆ. ದಿ ಕೇರಳ ಸ್ಟೋರಿ 2 (The Kerala Story 2) ಮಾಡುವಂತೆ ಆಫರ್ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಅವರನ್ನು ಮತಾಂತರಿಸಿ ಉಗ್ರರನ್ನಾಗಿಸುವ ಕಥೆಯನ್ನು ಹೊಂದಿತ್ತು. ಎರಡನೇ ಭಾಗದಲ್ಲಿ ಮುಸ್ಲಿಂ ಮುಗ್ಧ ಹುಡುಗರ ತಲೆಕೆಡಿಸಿ ಉಗ್ರರನ್ನಾಗಿ ಹೇಗೆ ಮಾಡಲಾಗುತ್ತಿದೆ ಎನ್ನುವ ಕಥೆಯನ್ನು ಹೊಂದಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತಾಗಿ ನಿರ್ದೇಶಕರು ಕೆಲ ಸುಳಿವುಗಳನ್ನೂ ನೀಡಿದ್ದಾರೆ. ಆದರೆ, ಅಧಿಕೃತವಾಗಿ ಯಾವಾಗ ಘೋಷಣೆಯಾಗಲಿದೆ ಎನ್ನುವ ಕುರಿತು ಅವರು ತಿಳಿಸಿಲ್ಲ.