ರಾಮಮಂದಿರ ಉದ್ಘಾಟನೆ ದಿನವೇ ನಮಗೆ ಹೆರಿಗೆಯಾಗಲಿ: ವೈದ್ಯರ ಬಳಿ ಗರ್ಭಿಣಿಯರ ಮನವಿ

Public TV
1 Min Read
ram mandir pregnant women

ಲಕ್ನೋ: ಜನವರಿ 22, ಶ್ರೀರಾಮಭಕ್ತರಿಗೆ ಸುದಿನ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ರಾಮಲಲ್ಲಾ (ಬಾಲ ರಾಮ) ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಈ ಪುಣ್ಯ ದಿನವೇ ನಮಗೆ ಹೆರಿಗೆ ಆಗಬೇಕು ಎಂದು ಅನೇಕ ಗರ್ಭಿಣಿಯರು ವೈದ್ಯರಲ್ಲಿ ಮನವಿ ಮಾಡಿದ್ದಾರೆ.

ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ (ಜನವರಿ 22) ಸಿಸೇರಿಯನ್ ಹೆರಿಗೆ ಮಾಡುವಂತೆ ಹಲವಾರು ಗರ್ಭಿಣಿಯರು ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಮನವಿ ಮಾಡಿದ್ದಾರೆ.

ayodhya ram mandir

ಗಣೇಶ್ ಶಂಕರ್ ವಿದ್ಯಾರ್ಥಿ ಮೆಮೋರಿಯಲ್ ಮೆಡಿಕಲ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೀಮಾ ದ್ವಿವೇದಿ ಮಾತನಾಡಿ, ಒಂದು ಲೇಬರ್ ರೂಮ್‌ನಲ್ಲಿ 12 ರಿಂದ 14 ಗರ್ಭಿಣಿಯರು ಸಿಸೇರಿಯನ್ ಹೆರಿಗೆಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಕೋರಿಕೆ ಮೇರೆಗೆ ಜನವರಿ 22 ರಂದು 35 ಸಿಸೇರಿಯನ್ ಆಪರೇಷನ್‌ಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಲ ಗರ್ಭಿಣಿಯರ ಹೆರಿಗೆ ದಿನಾಂಕವು ಜನವರಿ 22 ರ ಮುಂಚೆ ಅಥವಾ ನಂತರದ ದಿನದಲ್ಲಿತ್ತು. ಆದರೆ ಬಹುಪಾಲು ಗರ್ಭಿಣಿಯರು ತಮಗೆ ಜ.22 ರಂದೇ ಹೆರಿಗೆ ಆಗಬೇಕು ಎಂದು ಮನವಿ ಮಾಡಿದ್ದಾರೆ. ಅವರ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಕೆಲವರ ಮನವಿಗೆ ಒಪ್ಪಿಗೆ ಸೂಚಿಸಲಾಗಿದೆ.

ram mandir 1

ರಾಮಮಂದಿರದ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಕೆಲ ಗರ್ಭಿಣಿಯರು ಮತ್ತು ಅವರ ಕುಟುಂಬದ ಸದಸ್ಯರು ಪುರೋಹಿತರು ನೀಡಿರುವ ಮುಹೂರ್ತದಲ್ಲೇ ತಮಗೆ ಹೆರಿಗೆ ಆಗಬೇಕು ಎಂದು ಕೇಳಿಕೊಂಡಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಶ್ರೀರಾಮನು ಶೌರ್ಯ, ವಿಧೇಯತೆಯ ಪ್ರತೀಕ ಎಂದು ಜನರು ನಂಬುತ್ತಾರೆ. ಆದ್ದರಿಂದ ದೇವಾಲಯದಲ್ಲಿ ‘ಪ್ರಾಣ ಪ್ರತಿಷ್ಠಾ’ ದಿನದಂದು ಜನಿಸಿದ ಶಿಶುಗಳು ಸಹ ಶ್ರೀರಾಮನ ಗುಣಗಳನ್ನು ಹೊಂದಿರುತ್ತಾರೆ ಎಂಬುದು ಅವರ ನಂಬಿಕೆ.

Share This Article