ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigg Boss Kannada 10) ಶುರುವಾಗಲು ಕೌಂಟ್ ಡೌನ್ ಶುರುವಾಗಿದೆ. ಯಾರೆಲ್ಲಾ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ ಎಂದು ಒಂದಿಷ್ಟು ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಅದ್ವಿತಿ ಶೆಟ್ಟಿ (Adhvithi Shetty) ಕೂಡ ಹೋಗುತ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ವತಃ ನಟಿ ಅದ್ವಿತಿ ಶೆಟ್ಟಿ ಪಬ್ಲಿಕ್ ಟಿವಿ ಡಿಜಿಟಲ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಿಗ್ ಬಾಸ್ ಮನೆಗೆ (Bigg Boss Kannada) ಬರಲು ಆಫರ್ ಸಿಕ್ಕಿದ್ದು ನಿಜ. ಆದರೆ ನಾನು ಶೋನಲ್ಲಿ ಭಾಗಿಯಾಗ್ತಿಲ್ಲ. ಇತ್ತೀಚಿಗೆ ನನ್ನ ತಂದೆ ಅಗಲಿದರು. ಆ ನೋವಿನಿಂದ ಹೊರಬರಲು ಮಾನಸಿಕವಾಗಿ ಸಮಯಬೇಕಿದೆ. ಈ ನಡುವೆ ಫಿಟ್ನೆಸ್ ಕಡೆ ಕೂಡ ನಾನು ಗಮನ ನೀಡಿಲ್ಲ. ಬಿಗ್ ಬಾಸ್ ಶೋ ಬಗ್ಗೆ ಗೌರವಿದೆ. ಆ ಗೌರವಕ್ಕಾದರೂ ಸರಿಯಾದ ಪೂರ್ವ ತಯಾರಿ ಮಾಡಬೇಕು ಎಂದು ನಟಿ ತಿಳಿಸಿದ್ದಾರೆ.
ಮಾನಸಿಕವಾಗಿ ಮತ್ತು ಫಿಟ್ನೆಸ್ ವಿಚಾರದಲ್ಲಿ ನೋಡಿದರೆ ನಾನು ಈ ಬಾರಿ ಬಿಗ್ ಬಾಸ್ಗೆ ಹೋಗಲು ತಯಾರಿಲ್ಲ. ತಯಾರಿ ಇಲ್ಲದೇ ಹೋಗಬಾರದು. ಬಿಗ್ ಬಾಸ್ಗೆ ನಾನು ಹೋಗುತ್ತೀನಿ ಎನ್ನುವ ಸುದ್ದಿ ಸುಳ್ಳು ಎಂದಿದ್ದಾರೆ. ನನ್ನ ಸಹೋದರಿ ಅಶ್ವಿತಿ ಕೂಡ ಭಾಗಿಯಾಗುತ್ತಿಲ್ಲ. ಇನ್ನೂ ನಾನು ನಟಿಸಿರುವ ‘ಧೀರ ಸಾಮ್ರಾಟ್’, ‘ಶುಗರ್ ಫ್ಯಾಕ್ಟರಿ’ ರಿಲೀಸ್ಗೆ ರೆಡಿಯಿದೆ. ಚಿತ್ರತಂಡದ ಜೊತೆ ಸೇರಿ ಪ್ರಚಾರದ ಕಡೆ ಗಮನ ಹರಿಸಬೇಕಿದೆ ಎಂದು ಅದ್ವಿತಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಐ ಯ್ಯಾಮ್ ಇನ್ ಲವ್’ ಅಂತಿದ್ದಾರೆ ರಚಿತಾ ರಾಮ್
‘ಮಿಸ್ಟರ್ & ಮಿಸೆಸ್ ರಾಮಾಚಾರಿ’ ಸಿನಿಮಾದ ಮೂಲಕ ಅದ್ವಿತಿ ಶೆಟ್ಟಿ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಫ್ಯಾನ್, ಐರಾವನ್ ಸಿನಿಮಾಗಳ ಮೂಲಕ ನಟಿ ಗಮನ ಸೆಳೆದರು.
ವರದಿ: ಶ್ರುತಿ ನಾಗೇಶ್, ಪಬ್ಲಿಕ್ ಟಿವಿ ಡಿಜಿಟಲ್