ಬೆಂಗಳೂರು: ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ನಾನು ಬಿಜೆಪಿ ಉಳಿಸಿ ಅಭಿಯಾನ ಶುರು ಮಾಡುತ್ತೇನೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂಬ ಪ್ರಚಾರ ಆರಂಭಿಸುತ್ತೇನೆ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಹೇಳಿದ್ದಾರೆ.
ಶಿಸ್ತು ಸಮಿತಿಯಿಂದ ನೋಟಿ ನೀಡಿರುವ ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಡಿಯೂರಪ್ಪ (BS Yediyurappa) ವಿರುದ್ಧ ಮಾತನಾಡಿದಾಗ ಕೆಲವರು ನನ್ನನ್ನ ಕರೆದು ಬೆನ್ನು ತಟ್ಟಿದ್ದರು. ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ರೂಂನಲ್ಲಿ ಕರೆದು ಬೆನ್ನು ತಟ್ಟಿ, ಚೆನ್ನಾಗಿ ಮಾತನಾಡ್ತಿದ್ದೀಯಾ ರೇಣುಕಾಚಾರ್ಯ ಅಂದ್ರು. ಅವತ್ತು ಬೆನ್ನು ತಟ್ಟಿದ್ದು ಯಾರು ಅನ್ನೋದು ಬಹಿರಂಗಪಡಿಸಲ್ಲ ಅಂದ್ರು.
ಯಡಿಯೂರಪ್ಪ ಪರ ಮಾತಾಡಿದರೆ ದ್ವೇಷ. ಯಡಿಯೂರಪ್ಪ ಪರ ಮಾತನಾಡಿದರೆ ನೋಟಿಸ್ ಕೊಡ್ತಾರೆ. ಆದರೆ ಅವರ ವಿರುದ್ಧ ಮಾತನಾಡಿದರೆ ಬೆನ್ನು ತಟ್ಟುತ್ತಾರೆ. ಬಿಜೆಪಿಯಲ್ಲಿ (BJP Notice) ಶಿಸ್ತು ಪಾಲನಾ ಸಮಿತಿ ಅಂತ ಒಂದಿದೆ ಅನ್ನೋದೇ ಗುರುವಾರ ಗೊತ್ತಾಗಿರುವುದು. ನನ್ನ ಹೆತ್ತ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ ಯಡಿಯೂರಪ್ಪ ಹೀಗೆ ಮಾತನಾಡು ಅಂತ ನನಗೆ ಹೇಳಿಲ್ಲ. ಪಕ್ಷ ತಾಯಿ ಸಮಾನ ಅದಕ್ಕೆ ಮಾತನಾಡಿತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ವೀರಶೈವ ಲಿಂಗಾಯತರನ್ನ ಕಡೆಗಣಿಸುವ ಕೆಲಸ ಆಗುತ್ತಿದೆ. ಪಕ್ಷದ ಬೆಳವಣಿಗೆ ಬಗ್ಗೆ ಈಗಾಗಲೆ ಹಲವು ನಾಯಕರ ಜೊತೆ ಮಾತನಾಡಿದ್ದೇನೆ. ನಾನು ಮೋದಿ, ಅಮಿತ್ ಶಾ, ನಡ್ಡಾ ಎಲ್ಲರಿಗೂ ಪತ್ರ ಬರೆಯುತ್ತೇನೆ. ನೋಟಿಸ್ ಕೊಟ್ಟ ಮೇಲೆ ಇಂದಿನ ಸಭೆಗೆ ನಾನು ಹೋಗಿದ್ದರೆ ನನಗೆ ಗೌರವ ಸಿಗುತ್ತಿರಲಿಲ್ಲ ಅದಕ್ಕೆ ನಾನು ಹೋಗಿಲ್ಲ. ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ನಾನು ಬಿಜೆಪಿ ಉಳಿಸಿ ಅಭಿಯಾನ ಶುರು ಮಾಡುತ್ತೇನೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂಬ ಪ್ರಚಾರ ಆರಂಭಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಯಡಿಯೂರಪ್ಪ ನನ್ನ ಹೆಗಲ ಮೇಲೆ ಬಂದೂಕು ಇಟ್ಟು ಗುರಿ ಇಟ್ಟಿದ್ದಾರೆ ಅಂತ ಕೆಲವರು ಹೇಳುತ್ತಾರೆ. ಅದೆಲ್ಲಾ ಸುಳ್ಳು, ಯಡಿಯೂರಪ್ಪ ದೊಡ್ಡ ನಾಯಕ ಅವರು ಅಂತಹ ಸಣ್ಣ ಕೆಲಸ ಮಾಡಲ್ಲ. ಯಡಿಯೂರಪ್ಪನವರೇ ನಮಗೆ ಸ್ಪೂರ್ತಿ ಎಂದು ರೇಣುಕಾಚಾರ್ಯ ಹೇಳಿದರು.
Web Stories