ಬೆಂಗಳೂರು: ಹೆಲ್ಪ್ಲೈನ್ (Helpline) ಸ್ಥಾಪಿಸಿ ಅದರ ನಿರ್ವಹಣೆ ಮಾಡಿದ ಒಬ್ಬರಿಗೆ ತಿಂಗಳಿಗೆ 4 ಲಕ್ಷ ರೂ. ವೇತನ ನೀಡಿರುವ ಬಗ್ಗೆ ಹಾಗೂ ಅದರಿಂದ ಪ್ರಯೋಜನ ಆಗದಿದ್ದರೂ ಮುಂದುವರಿಸಿದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಜಮೀರ್ ಅಹ್ಮದ್ (Zameer Ahmed) ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸೋಮವಾರ ಅಧಿಕಾರಿಗಳೊಂದಿಗೆ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ (Minority Welfare Department) ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಹೆಲ್ಪ್ಲೈನ್ ಸ್ಥಾಪಿಸಿ ಅದನ್ನು ನಿರ್ವಹಿಸಿದವರಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಿಂತ ಮೂರು ಪಟ್ಟು ವೇತನವನ್ನು ಒಬ್ಬರಿಗೆ ನೀಡಿದ್ದು ಹೇಗೆ? ಸಹಾಯವಾಣಿ ಕೇಂದ್ರಕ್ಕೆ ವಾರ್ಷಿಕ 2.5 ಕೋಟಿ ರೂ. ವೆಚ್ಚ ಮಾಡುತ್ತಿದ್ದರೂ ಪ್ರತ್ಯೇಕವಾಗಿ ಸಹಾಯವಾಣಿಯ ಅಗತ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮೆಟ್ರೋ ಹತ್ತಿದ!
ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿ ಹಾಗೂ ವಕ್ಫ್ ಸೇರಿದಂತೆ ಇರುವ ಯೋಜನೆಗಳ, ಹೊಸ ಯೋಜನೆಗಳ ಅನುಷ್ಠಾನದ ವಾರ್ಷಿಕ ಅನುದಾನದ ಬಗ್ಗೆ ಬಜೆಟ್ ಪೂರ್ವಬಾವಿ ಸಭೆಗೂ ಮುನ್ನ ಪ್ರಸ್ತಾವನೆಗೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಅಪೂರ್ಣಗೊಂಡಿರುವ 126 ಶಾದಿ ಮಹಲ್ಗಳ ಕಾಮಗಾರಿ ಪೂರ್ಣಗೊಳಿಸಲು 56 ಕೋಟಿ ರೂ. ಅಗತ್ಯವಿದೆ. ಅಲ್ಲದೇ ಹೊಸದಾಗಿ ಶಾದಿ ಮಹಲ್ ನಿರ್ಮಾಣಕ್ಕೆ ಬೇಡಿಕೆ ಇರುವ ಬಗ್ಗೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ: ಬೆಂ-ಮೈ ದಶಪಥ ಹೆದ್ದಾರಿ ಟೋಲ್ ಮತ್ತಷ್ಟು ದುಬಾರಿ- ಜೂನ್ 1ರಿಂದಲೇ ಪ್ರಯಾಣಿಕರ ಜೇಬಿಗೆ ಕತ್ತರಿ