ಸಾಕಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರದ ಖ್ಯಾತಿಯ ನಿರ್ದೇಶಕ ‘ಸಿದ್ದು ಪೂರ್ಣಚಂದ್ರ’ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರ ‘ಬ್ರಹ್ಮಕಮಲ’. ಸಿದ್ದು ಪೂರ್ಣಚಂದ್ರ ಅವರೇ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.
ಚಿತ್ರದ ಮೊದಲ ನೋಟವನ್ನು ಹೊಸ ವರ್ಷಕ್ಕೆ ಬಿಡುಗಡೆ ಮಾಡಿ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ. ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ. ಈಗಾಗಲೇ ಚಿತ್ರೀಕರಣ ಮುಗಿಸಿ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
‘ಬ್ರಹ್ಮಕಮಲ’ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅದ್ವಿತಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್,ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಕವಿತಾ ಕಂಬಾರ್, ರಾಧಾ ರಾಮಚಂದ್ರ ಇನ್ನೂ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಛಾಯಾಗ್ರಹಣ ಲೋಕೇಂದ್ರ ಸೂರ್ಯನಾರಾಯಣ, ಸಂಕಲನ ದೀಪು ಸಿ ಎಸ್, ಸಂಗೀತ ಅನಂತ್ ಆರ್ಯನ್ ಹೊಣೆ ಹೊತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರು ಎ.ಕೆ. ಪುಟ್ಟರಾಜು ಮತ್ತು ಪ್ರಮಿಳಾ ಸುಬ್ರಹ್ಮಣ್ಯಂ. ನಿರ್ಮಾಣ ನಿರ್ವಹಣೆ ನಾಗರತ್ನ ಕೆ ಹೆಚ್, ವಸ್ತ್ರ ವಿನ್ಯಾಸ ಋತು ಚೈತ್ರ, ಕಲೆ ಬಸವರಾಜ್ ಆಚಾರ್ ಕೆ ಆರ್.