ಎರಡೂವರೆ ವರ್ಷಗಳ ಹಿಂದೆ ನಡೆದ ಸುಶಾಂತ್ ಸಿಂಗ್ ಸಾವು ಪ್ರಕರಣ ಇದೀಗ ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಲವರು ಹೇಳಿದ್ದರೆ, ಅವರು ಆತ್ಮಹತ್ಯೆ ಅಲ್ಲ ಎಂದು ಅವರ ಕುಟುಂಬ ವಾದಿಸಿತ್ತು. ಈ ವಾದ ವಿವಾದಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಈವರೆಗೂ ಅವರ ಮರಣೋತ್ತರ ಅಂತಿಮ ವರದಿ ಬಂದಿಲ್ಲ. ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಇದು ಆತ್ಮಹತ್ಯೆ ಅಲ್ಲ ಮರ್ಡರ್ ಎನ್ನುವ ಆಘಾತಕಾರಿ ವಿಷಯವನ್ನು ಶವಪರೀಕ್ಷೆಯ ಸಿಬ್ಬಂದಿಯೇ ಬಾಯ್ಬಿಟ್ಟಿದ್ದಾರೆ. ಈ ಮಾತು ಬಾಲಿವುಡ್ ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸುಶಾಂತ್ ಸಿಂಗ್ ಶವಪರೀಕ್ಷೆ ನಡೆಸಿದ ಸಿಬ್ಬಂದಿಗಳಲ್ಲಿ ರೂಪಾ ಕುಮಾರ್ ಶಾ ಕೂಡ ಒಬ್ಬರು. ಅವರು ಹಲವು ವರ್ಷಗಳ ನಂತರ ಮಾತನಾಡಿ, ‘ಅವತ್ತು ನಮ್ಮ ಮುಂದೆ ಐದಾರು ಶವಗಳು ಇದ್ದವು. ನಾವು ಅವುಗಳನ್ನು ಪೋಸ್ಟ್ ಮಾರ್ಟಂ ಮಾಡಬೇಕಿತ್ತು. ಅದರಲ್ಲಿ ಒಂದು ವಿಐಪಿ ಶವ ಅಂತ ಗೊತ್ತಾಯಿತು. ಬೇಗ ಬೇಗ ಶವಪರೀಕ್ಷೆ ಮಾಡುವಂತೆ ನಮಗೆ ಸೂಚಿಸಲಾಯಿತು. ಆನಂತರ ನಮಗೆ ಗೊತ್ತಾಗಿದ್ದು ಅದು ಸುಶಾಂತ್ ಸಿಂಗ್ ಅವರ ಶವ ಅಂತ. ದೇಹದ ಮೇಲೆ ಹಲವು ಗುರುತುಗಳು ಇದ್ದವು. ಕುತ್ತಿಗೆ ಮೇಲೂ ಇದ್ದವು’ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಸುಶಾಂತ್ ಸಿಂಗ್ ಶವ ಪರೀಕ್ಷೆ ಮಾಡುವಾಗ ತಮಗೆ ಒತ್ತಡವೂ ಇತ್ತು ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ. ಶವಪರೀಕ್ಷೆ ಮಾಡುವಾಗ ರೆಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಸುಶಾಂತ್ ಅವರದ್ದು ಕೇವಲ ಫೋಟೋ ಮಾತ್ರ ತಗೆಯಲಾಯಿತು. ರಾತ್ರೋರಾತ್ರಿ ಪೋಸ್ಟ್ ಮಾರ್ಟಂ ಮಾಡಿ ಶವವನ್ನು ಪೊಲೀಸನವರಿಗೆ ಹಸ್ತಾಂತರಿಸಿದೆವು ಎಂದೂ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ನಡುರಾತ್ರಿಯಲ್ಲಿ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಔಟ್
ನಟ ಸುಶಾಂತ್ 2020 ಜೂನ್ ನಲ್ಲಿ ಅವರು ವಾಸವಿದ್ದ ಅಪಾರ್ಟ್ಮೈಂಟ್ ನಲ್ಲೇ ಶವವಾಗಿ ಪತ್ತೆಯಾಗಿದ್ದರು. ಆನಂತರ ಅನೇಕ ಅನುಮಾನಗಳು ಹುಟ್ಟಿಕೊಂಡವು. ಬಾಲಿವುಡ್ ನ ಕೆಲ ಕಲಾವಿದರು ಮತ್ತು ನಿರ್ಮಾಣ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನಗಳು ನಡೆದವು. ಸ್ವತಃ ಸುಶಾಂತ್ ಅವರ ಸಿಬ್ಬಂದಿ ಮೇಲೂ ಅನುಮಾನ ಪಡಲಾಯಿತು. ಆದರೆ, ಈ ಪ್ರಕರಣ ಇದೀಗ ಬೇರೆ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಪೊಲೀಸ್ ಇಲಾಖೆ ಏನು ಹೇಳುತ್ತದೆಯೋ ಕಾದು ನೋಡಬೇಕಿದೆ.