ಹೈದರಾಬಾದ್: ಸರ್ಕಾರಿ ಶಾಲೆಗಾಗಿ 800 ವರ್ಷ ಹಳೆಯ ಕಾಕತೀಯರ ಕಾಲದ ಶಿವ ದೇವಾಲಯವನ್ನು (Shiva Temple) ನೆಲಸಮ ಮಾಡಿದ ಘಟನೆ ತೆಲಂಗಾಣದ (Telangana) ವಾರಂಗಲ್ (Warangal) ಜಿಲ್ಲೆಯಲ್ಲಿ ನಡೆದಿದೆ. ದೇವಾಲಯ ಕೆಡವಿದ್ದಕ್ಕೆ ಸಾರ್ವಜನಿಕರು, ಇತಿಹಾಸ ತಜ್ಞರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಖಾನಾಪುರ ಮಂಡಲದ ಅಶೋಕ್ ನಗರದಲ್ಲಿರುವ ಈ ದೇವಾಲಯ 13ನೇ ಶತಮಾನದ ಕಾಕತೀಯ ದೊರೆ ಗಣಪತಿದೇವನ ಕಾಲದ್ದಾಗಿದೆ. ಈ ದೇವಾಲಯದಲ್ಲಿದ್ದ ಶಾಸನದಲ್ಲಿ ರಾಜನನ್ನು ʻಮಹಾರಾಜʼ ಮತ್ತು ʻರಾಜಾಧಿರಾಜುಲುʼ ಎಂದು ಸಂಬೋಧಿಸುವ ಅಪರೂಪದ ಏಳು ಸಾಲುಗಳ ತೆಲುಗು ಸಾಲುಗಳಿವೆ. 1965 ರಲ್ಲಿ ಪರಂಪರೆ ಇಲಾಖೆಯಿಂದ (Heritage Department) ದಾಖಲಿಸಲ್ಪಟ್ಟ ಈ ದೇವಾಲಯ ಪ್ರಾಚೀನ ಕೋಟೆಗಳಿಗೆ ಹೆಸರುವಾಸಿಯಾದ ಐತಿಹಾಸಿಕ ಕೋಟ ಕಟ್ಟ ಎಂಬ ಮಣ್ಣಿನ ಕೋಟೆ ಪ್ರದೇಶದೊಳಗೆ ಇತ್ತು. ಈ ಪರಂಪರೆಯ ತಾಣವನ್ನು ಸುಲಭವಾಗಿ ಸಂರಕ್ಷಿಸಬಹುದಿತ್ತು. ಇಲ್ಲವೇ ಸ್ಥಳಾಂತರಿಸಬಹುದಿತ್ತು ಎಂಬುದು ತಜ್ಞರು ವಾದವಾಗಿದೆ. ಇದನ್ನೂ ಓದಿ: ಡಿಎಂಕೆ, ಎಐಎಡಿಎಂಕೆ ಮೈತ್ರಿ – ನಾವು ತಟಸ್ಥವಾಗಿದ್ದೇವೆ, ಬೆಂಬಲ ನೀಡಲ್ಲ: ತಮಿಳುನಾಡು ಬಿಜೆಪಿ
ದೇವಾಲಯ ಕೆಡವಿದ್ದಕ್ಕೆ ತೆಲಂಗಾಣದ ವಕೀಲ ರಾಮರಾವ್ ಇಮ್ಮನೇನಿ ಅವರು ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಪುರಾತತ್ವ ಇಲಾಖೆ ಪ್ರಕರಣ ದಾಖಲಿಸಿದೆ. ರಾಜ್ಯ ಸರ್ಕಾರವು ಕಡ್ಡಾಯ ಪರಂಪರೆ ಸಂರಕ್ಷಣಾ ಸಮಿತಿಯನ್ನು ರಚಿಸುವಲ್ಲಿ ವಿಫಲವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪುರಾತತ್ವ ಮತ್ತು ದತ್ತಿ ಇಲಾಖೆಯಿಂದ ಕಡ್ಡಾಯ ಅನುಮೋದನೆಗಳಿಲ್ಲದೆ ಕೆಲಸಕ್ಕೆ ಅನುಮತಿ ನೀಡಿದವರ ವಿರುದ್ಧ ತೆಲಂಗಾಣ ಪರಂಪರೆ ಕಾಯ್ದೆಯ ಸೆಕ್ಷನ್ 30ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯವನ್ನು ಉದ್ದೇಶಪೂರ್ವಕವಾಗಿ ಧ್ವಂಸ ಮಾಡಲಾಗಿದೆ ಎಂಬ ಆರೋಪವನ್ನು ವಾರಂಗಲ್ ಜಿಲ್ಲಾಡಳಿತ ನಿರಾಕರಿಸಿದೆ. 30 ಎಕರೆ ಜಾಗದಲ್ಲಿ ದಟ್ಟ ಪೊದೆಗಳನ್ನು ತೆರವುಗೊಳಿಸುವಾಗ ಹಳೆಯ ಶಿಥಿಲಗೊಂಡ ಅವಶೇಷಗಳು ಮಾತ್ರ ಕಂಡುಬಂದಿವೆ. ಅಲ್ಲದೇ ಇದು ಅಧಿಕೃತವಾಗಿ ಸಂರಕ್ಷಿತ ಸ್ಮಾರಕವೆಂದು ದಾಖಲಿಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ದೇವಾಲಯ ಕೆಡವಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ವಾರಂಗಲ್ ಜಿಲ್ಲಾಧಿಕಾರಿ ಡಾ. ಸತ್ಯ ಶಾರದ ಮತ್ತು ನರಸಂಪೇಟೆ ಶಾಸಕ ದೋಂತಿ ಮಾಧವ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಅದೇ ಸ್ಥಳದಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ಪುನರ್ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಇತಿಹಾಸಕಾರರು, ಸ್ತಪತಿಗಳು (ಸಾಂಪ್ರದಾಯಿಕ ವಾಸ್ತುಶಿಲ್ಪಿಗಳು) ಮತ್ತು ಪುರಾತತ್ವ ಇಲಾಖೆಯೊಂದಿಗೆ ಸಮಾಲೋಚಿಸಿ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಡಿಎಂಕೆ-ಎಐಎಡಿಎಂಕೆ ಮೈತ್ರಿ? – ಬಿಜೆಪಿ ಮೈತ್ರಿ ಬಿಟ್ಟು ಬನ್ನಿ ಅಂತ ಡಿಎಂಕೆ ಷರತ್ತು

