ಭೋಪಾಲ್: ವೃದ್ಧರೊಬ್ಬರ ತಲೆಯ ಮೇಲೆ ಕೊಂಬು ಬೆಳೆದ ವಿಚಿತ್ರ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಸಾಗರ್ ಜಿಲ್ಲೆಯ ರಹ್ಲಿ ಗ್ರಾಮದ ನಿವಾಸಿ ಶ್ಯಾಮ್ಲಾಲ್ ಯಾದವ್ ಅವರ ತಲೆಯ ಮೇಲೆ ಕೊಂಬು ಬೆಳೆದಿದ್ದು, ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಅದನ್ನು ತೆಗೆದುಹಾಕಿದ್ದಾರೆ. 74 ವರ್ಷದ ಶ್ಯಾಮ್ಲಾಲ್ ಅವರು ಸುಮಾರು ದಿನಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಇತ್ತೀಚೆಗಷ್ಟೇ ವೈದ್ಯರ ಬಳಿ ಬಂದು ತಪಾಸಣೆ ಮಾಡಿಸಿದ್ದರು ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ಯಾಮ್ಲಾಲ್ ಅವರು, ಈ ಹಿಂದೆ ತಲೆಯ ಮೇಲೆ ಚಿಕ್ಕ ಗಾಯವಾಗಿತ್ತು. ನಂತರದ ದಿನಗಳಲ್ಲಿ ಅದು ಕೊಂಬಿನ ರೂಪದಲ್ಲಿ ಬೆಳೆಯಲು ಆರಂಭಿಸಿತ್ತು. ಆಗ ನಾನೇ ಅದನ್ನು ಕತ್ತರಿಸಿ ಹಾಕಿಕೊಳ್ಳುತ್ತಿದ್ದೆ. ಯಾವಾಗ ಗಾಯದ ಕೊಂಬಿನ ಪ್ರಮಾಣ ಹೆಚ್ಚಾಯಿತೋ ಆಗ ವೈದ್ಯರನ್ನು ಸಂಪರ್ಕಿಸಿದೆ ಎಂದು ತಿಳಿಸಿದ್ದಾರೆ.
ಶ್ಯಾಮ್ಲಾಲ್ ಅವರಿಗೆ ಕಾಣಿಸಿಕೊಂಡ ವಿಚಿತ್ರ ಕಾಯಿಲೆಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವ ಪ್ರಶ್ನೆ ಪ್ರಾರಂಭದಲ್ಲಿ ವೈದ್ಯರಿಗೆ ಕಾಡಿತ್ತಂತೆ. ಅಂತಿಮವಾಗಿ ಪರಿಹಾರ ಕೈಗೊಂಡ ವೈದ್ಯರು ಶ್ಯಾಮ್ಲಾಲ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಕೊಂಬನ್ನು ತೆಗೆದಿದ್ದಾರೆ.
ಶ್ಯಾಮ್ಲಾಲ್ ಅವರು ಸೆಬಾಸಿಯನ್ ಗ್ರಂಥಿಗೆ ಸಂಬಂಧಪಟ್ಟ ಹಾರ್ನ್ ಕಂಡಿಷನ್ನಿಂದ ಬಳುತ್ತಿದ್ದಾರೆ. ಈ ಸಮಸ್ಯೆ ಇದ್ದವರಿಗೆ ಸೂರ್ಯನ ಬಿಸಿಲು ನೇರವಾಗಿ ತಗಲುವ ಚರ್ಮದ ಭಾಗದಲ್ಲಿ ಹೀಗೆ ಕೊಂಬುಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಈ ಸೆಬಾಸಿಯಸ್ ಹಾರ್ನ್ ಕಾಯಿಲೆಯನ್ನು ಡೆವಿಲ್ ಹಾರ್ನ್ ಅಂತ ಕರೆಯಲಾಗುತ್ತದೆ. ಶ್ಯಾಮ್ಲಾಲ್ ಅವರ ತೆಲೆಯಲ್ಲಿ ಕಾಣಿಸಿಕೊಂಡಿದ್ದ ಡೆವಿಲ್ ಹಾರ್ನ್ ಬೇರು ಅಷ್ಟಾಗಿ ಆಳಕ್ಕೆ ಹೋಗಿರಲಿಲ್ಲ ಎಂದು ಡಾ. ವಿಶಾಲ್ ಗಜ್ಭಿಯಲ್ ವೈದ್ಯರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಹಳ್ಳಿಯೊಂದರ ಅಬುಲ್ ಬಜಂದರ್ ಕಳೆದ ಎರಡು ದಶಕಗಳಿಂದ ಇಂತಹದ್ದೇ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೈ ಹಾಗೂ ಕಾಲುಗಳ ಮೇಲೆ ಮರದ ತೊಗಟೆ ಬೆಳೆಯುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಂಗ್ಲಾದೇಶದ ಯುವಕ, ಟ್ರೀ ಮ್ಯಾನ್ ಕಳೆದ ವರ್ಷ ಮತ್ತೆ ಆಸ್ಪತ್ರೆ ಸೇರಿದ್ದರು. ಅಬುಲ್ ಬಜಂದರ್ Epidermodysplasia Verruciformis ಎಂಬ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರೆ. ಇದರಿಂದಾಗಿ ಅವರ ಮುಂಗೈ ಹಾಗೂ ಮುಂಗಾಲು ಭಾಗದಲ್ಲಿ ತೊಗಟೆ ಬೆಳೆಯುತ್ತಿದೆ.
ಇದೊಂದು ವಿರಳ ಕೇಸ್ ಆಗಿದ್ದು, 2017ರಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ ಅದಕ್ಕೆ ಪೂರಕ ಚಿಕಿತ್ಸೆ ಮುಂದುವರಿಸಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪ್ರಗತಿ ನಡೆಸಿದ್ದೆವು. ಆದರೆ ಯುವಕ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಒಪ್ಪದೇ ತಮ್ಮ ಗ್ರಾಮಕ್ಕೆ ವಾಪಾಸ್ ಹೋಗಿಬಿಟ್ಟ. ಇದಾದ ಬಳಿಕ ಆತನಿಗೆ ತಿಳಿಸಿ ಆಸ್ಪತ್ರೆಗೆ ಬರುವಂತೆ ನಾವು ಕೇಳಿಕೊಂಡರೂ ಬಂದಿರಲಿಲ್ಲ ಎಂದು ಢಾಕಾ ಮೆಡಿಕ್ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ನಿರ್ದೇಶದಕ ಡಾ.ಸಮಂತ್ ಲಾಲ್ ಸೇನ್ ತಿಳಿಸಿದ್ದರು.
ಈ ಕಾಯಿಲೆ ವಿಎಚ್ಪಿ ಇನ್ಫೆಕ್ಷನ್ ನಿಂದ ಬರುತ್ತದೆ. ಆದರೆ ಇದು ದೊಡ್ಡ ಪ್ರಮಾಣದಲ್ಲಿ ಹರಡುವುದು ವಿರಳ. ಇಂತಕ ಕಾಯಿಲೆಯಿಂದ ಬಳಲುತ್ತಿದ್ದ ಬಜಂದರ್ ಗೆ ಸ್ವಂತ ಕೈಗಳಿಂದ ಊಟ, ಬ್ರಶ್, ಸ್ನಾನ ಸೇರಿದಂತೆ ನಿತ್ಯ ಕೆಲಸಗಳನ್ನು ಮಾಡಲು ಬರುತ್ತಿರಲಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ, ತೊಗಟೆಯನ್ನು ತೆಗೆಯಲಾಗಿತ್ತು. ಚಿಕಿತ್ಸೆಯ ಬಳಿಕ ಬಜಂದರ್ ಚೇತರಿಸಿಕೊಂಡಿದ್ದ ಎಂದು ಹೇಳಿದ್ದರು.