ಸಾಂದರ್ಭಿಕ ಚಿತ್ರ
ನವದೆಹಲಿ: ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಶನಿವಾರ ನಡೆದಿದೆ.
ವಿಜೇಂದರ್ ರಾಣಾ ಮೃತ ದುರ್ದೈವಿ ವ್ಯಕ್ತಿ. ರಾಣಾ ಅವರ ಟೆಂಪೋ ನಾಯಿಮರಿಗೆ ತಾಗಿತ್ತೆಂದು ಸಿಟ್ಟುಗೊಂಡ ನಾಯಿಯ ಮಾಲೀಕ ಈ ಕೃತ್ಯ ಎಸಗಿದ್ದಾನೆ.
ಏನಿದು ಘಟನೆ?:
ರಾಣಾ ಅವರ ಟಾಟಾ ಏಸ್ ಟೆಂಪೋ ಆಕಸ್ಮತ್ತಾಗಿ ನಾಯಿಗೆ ಟಚ್ ಆಗಿದೆ. ಈ ವೇಳೆ ನಾಯಿಯ ಮಾಲೀಕ ತಗಾದೆ ತೆಗೆದಿದ್ದಾನೆ. ಇಷ್ಟು ಮಾತ್ರವಲ್ಲದೇ ಸ್ಥಳೀಯರನ್ನು ಸ್ಥಳದಲ್ಲಿ ಜಮಾಯಿಸುವಂತೆ ಮಾಡಿದ್ದಾನೆ. ಈ ವೇಳೆ ರಾಣಾ ಸಹೋದರ ಕೂಡ ಸ್ಥಳಕ್ಕೆ ದೌಡಾಯಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಅಂದರೆ ಮಧ್ಯರಾತ್ರಿ 12.50ರ ಸುಮಾರಿಗೆ ರಾಣಾ ಸಹೋದರಿ ಪೊಲೀಸರಿಗೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.
ಮಾತಿನ ಚಕಮಕಿ ಮುಂದುವರೆದು ತಾರಕಕ್ಕೇರಿ ಟೆಂಪೋ ಚಾಲಕ ವಿಜೇಂದರ್ ರಾಣಾ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಕೂಡಲೇ ಅವರನ್ನು ಮಟ ರೂಪ್ ರಾಣಿ ಮಾಗ್ಗೋ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆ ಗಂಭೀರ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಇವರ ಸಹೋದರ ರಾಜೇಶ್ ಅವರಿಗೂ ಚಾಕು ಇರಿತವಾಗಿದ್ದು, ಗಾಯಗಳಾಗಿವೆ. ಸದ್ಯ ರಾಜೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮೂವರು ಆರೋಪಿಗಳಾದ ಅಂಕಿತ್, ಪರಸ್ ಹಾಗೂ ಅವರ ಮನೆ ಮಾಲೀಕ ದೇವ್ ಚೋಪ್ರಾ ಇದೀಗ ತಲೆಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಲಾಗಿದೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv