ಅಮರಾವತಿ: ಆಂಧ್ರಪ್ರದೇಶದ (Andhra Pradesh) ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ನಡೆಸುತ್ತಿರುವ ರ್ಯಾಲಿ ವೇಳೆ ನೂಕುನುಗ್ಗಲಿನಿಂದ ಕಾಲ್ತುಳಿತಕ್ಕೆ (Stampede) ಇತ್ತೀಚೆಗಷ್ಟೇ 8 ಮಂದಿ ದಾರುಣ ಸಾವಿಗೀಡಾದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ನಾಯ್ಡು ಅವರ ರ್ಯಾಲಿ ವೇಳೆ ಗುಂಟೂರು (Guntur) ಜಿಲ್ಲೆಯಲ್ಲಿ ಕಾಲ್ತುಳಿತಕ್ಕೆ ಮತ್ತೆ 3 ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ 2024ರ ವಿಧಾನಸಭಾ ಚುನಾವಣೆಯ ತಯಾರಿಗಾಗಿ ರಾಜ್ಯಾದ್ಯಂತ ನಾಯ್ಡು ಅವರು ಸರಣಿ ರಾಜಕೀಯ ಸಭೆಗಳನ್ನು ನಡೆಸುತ್ತಿದ್ದಾರೆ. ರ್ಯಾಲಿ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ವೇಳೆ ತಳ್ಳಾಟ-ನೂಕಾಟ ಜೋರಾಗಿತ್ತು. ಕಾಲ್ತುಳಿತದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು
ಗುಂಟೂರಿನಲ್ಲಾದ ಕಾಲ್ತುಳಿತ ದುರಂತದ ಬಗ್ಗೆ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ (Jagan Mohan Reddy) ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಎಲ್ಲ ರೀತಿಯ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಸರ್ಕಾರದ ನೆರವಿನ ಭರವಸೆ ನೀಡಿದ್ದಾರೆ.
ಮೂರು ದಿನಗಳ ಹಿಂದೆ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಮಾಜಿ ಸಿಎಂ ನಾಯ್ಡು ಅವರ ರೋಡ್ ಶೋ ವೇಳೆ ಕಾಲ್ತುಳಿತಕ್ಕೆ 8 ಮಂದಿ ಬಲಿಯಾಗಿದ್ದರು. ಘಟನೆಗೆ ವಿಷಾದ ವ್ಯಕ್ತಪಡಿಸಿದ್ದ ನಾಯ್ಡು ಅವರು ತಮ್ಮ ಸಭೆಗಳನ್ನು ರದ್ದುಗೊಳಿಸಿ, ಮೃತರ ಕುಟುಂಬಕ್ಕೆ 24 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಇದನ್ನೂ ಓದಿ: ಭೀಕರ ಅಪಘಾತ- ಡಿಕ್ಕಿ ಹೊಡೆದು 12 ಕಿ.ಮೀ ಎಳೆದೊಯ್ದ ಕಾರು, ಯುವತಿ ದುರ್ಮರಣ
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು, ದುರಂತಕ್ಕೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥರ ವಿರುದ್ಧ ಹರಿಹಾಯ್ದಿದ್ದರು. ಪ್ರಚಾರದ ಉನ್ಮಾದವೇ ಈ ದುರಂತಕ್ಕೆ ಕಾರಣ ಎಂದು ನಾಯ್ಡು ವಿರುದ್ಧ ಕಿಡಿಕಾರಿದ್ದರು.