ಮುಂಬೈ: ಶಿವಸೇನಾ (Shiv Sena UBT)) ಮುಖಂಡ ಸಂಜಯ್ ರಾವತ್ (Sanjay Raut) ಮತ್ತು ಅವರ ಸಹೋದರ ಸುನೀಲ್ ರಾವತ್ ಅವರಿಗೆ ಕೊಲೆ ಬೆದರಿಕೆ (Death Threats) ಹಾಕಿರುವ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಒಬ್ಬ ಆರೋಪಿ ಆಟೋ ಚಾಲಕ ಹಾಗೂ ಮತ್ತೊಬ್ಬ ಇಂಟೀರಿಯರ್ ಡಿಸೈನಿಂಗ್ ಕೆಲಸಗಾರ ಎಂದು ತಿಳಿದು ಬಂದಿದೆ. ಕುಡಿದ ಅಮಲಿನಲ್ಲಿ ರಾವತ್ ಸಹೋದರರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ವಿಚಾರವಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಐತಿಹಾಸಿಕ ಕ್ಷಣಕ್ಕೆ ಕರ್ನಾಟಕ ಸಾಕ್ಷಿ- 4 ಕಿ.ಮೀ ಬಸ್ನಲ್ಲಿ ಸಿಎಂ ಸಂಚಾರ
ಮೊದಲು ಸುನಿಲ್ ರಾವತ್ ಅವರಿಗೆ ಕರೆ ಬಂದಿದ್ದು, ಸಂಜಯ್ ರಾವತ್ ಹಾಗೂ ಅವರ ಸಹೋದರನ ಮೇಲೆ ಗುಂಡಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ರಾವತ್ ಸಹೋದರರು ನೀಡಿದ ಫೋನ್ ನಂಬರ್ ಹಾಗೂ ಕರೆಯ ರೆಕಾರ್ಡಿಂಗ್ ಆಧಾರದ ಮೇಲೆ ಫೋನ್ಗಳ ಸ್ಥಳವನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಸಹೋದರನಿಗೆ ಬಂದಿರುವ ಬೆದರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ನನಗೆ ಬಂದಿರುವ ಬೆದರಿಕೆಯನ್ನಲ್ಲ. ಆದರೆ ಸರ್ಕಾರ ಅಂತಹ ಬೆದರಿಕೆಗಳನ್ನು ಬಯಸುತ್ತಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಸೆಕ್ಷನ್ 506ರ ಅಡಿ ಕೊಲೆ ಬೆದರಿಕೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಮಸ್ಯೆ ಬಗೆಹರಿದರೆ ಮಾತ್ರ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುತ್ತೇನೆ: ಪಟ್ಟು ಬಿಡದ ಸಾಕ್ಷಿ ಮಲಿಕ್