ಹಾಸನ: ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹಾಸನ ತಾಲೂಕಿನ ಈಚಲಹಳ್ಳಿ ಗ್ರಾಮದ ಸಿಆರ್ಪಿಎಫ್ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈಚಲಹಳ್ಳಿಯ ಹೇಮಂತ್ ಕುಮಾರ್ (42) ಮೃತ ಯೋಧ. ಸಿಆರ್ಪಿಎಫ್ 150ನೇ ಬಟಾಲಿಯನ್ನಲ್ಲಿ ಸೇವೆಸಲ್ಲಿಸುತ್ತಿದ್ದ ಹೇಮಂತ್ ಕುಮಾರ್, ಛತ್ತೀಸ್ ಗಢದ ಸುಕ್ಮಾದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ.
ಕಳೆದ 19 ವರ್ಷಗಳಿಂದ ಸಿಆರ್ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹೇಮಂತ್ ಕುಮಾರ್, ಎರಡು ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಪಡೆದು ವಾಪಸ್ ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ವಿಧಿಯ ಕ್ರೂರ ಆಟಕ್ಕೆ ಯೋಧ ಬಲಿಯಾಗಿದ್ದಾರೆ. ನಾಳೆ ಅಥವಾ ನಾಡಿದ್ದು ಯೋಧನ ಮೃತದೇಹ ಹಾಸನಕ್ಕೆ ಆಗಮಿಸಲಿದ್ದು, ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.