ಚಿಕ್ಕಮಗಳೂರು: ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ (Labour) ಮೇಲೆ ತೋಟದ ಮಾಲೀಕ (Owner) ಹಲ್ಲೆ (Assault) ಮಾಡಿದ್ದು, ಇದರಿಂದ 2 ತಿಂಗಳ ಗರ್ಭಿಣಿಗೆ (Pregnant) ಗರ್ಭಪಾತವಾಗಿದೆ (Miscarriage) ಎಂದು ಕೂಲಿ ಕಾರ್ಮಿಕರು ತೋಟದ ಮಾಲೀಕನ ವಿರುದ್ಧ ಅಸಮಾಧಾನ ಹೊರಹಾಕಿ, ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ತಾಲೂಕಿನ ಜೇನುಗದ್ದೆ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ.
ಪುರ ಗ್ರಾಮದ ಜಗದೀಶ್ ಎಂಬವರ ತೋಟದಲ್ಲಿ ಆಲ್ದೂರು ಸಮೀಪದ 6-7 ಕುಟುಂಬಗಳು ಕಳೆದ 4-5 ತಿಂಗಳಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಆದರೆ, ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಕುಟುಂಬಗಳ ಚಿಕ್ಕ ಮಕ್ಕಳ ಜಗಳ ದೊಡ್ಡವರನ್ನು ಮುಟ್ಟಿ ಮಾಲೀಕರ ಬಳಿಯೂ ಹೋಗಿತ್ತು. ಈ ವೇಳೆ ಮಾಲೀಕ ಮಕ್ಕಳ ಜಗಳ ಸುಮ್ಮನರ್ರೋ ಎಂದು ಹೇಳಿ ಸುಮ್ಮನಾಗಿದ್ದರೆ ಮುಗಿದೋಗುತ್ತಿತ್ತು. ಸಾಹುಕಾರರು ದೊಡ್ಡವರಾಗುತ್ತಿದ್ದರು. ಆದರೆ ಕಾರ್ಮಿಕರು ದೂರು ಹೇಳುತ್ತಿದ್ದಂತೆ ಏಕಾಏಕಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಪಿಐ(ಎಂ) ಮುಖಂಡನ ಮನೆಯಲ್ಲಿ ಬಾಂಬ್ ಪತ್ತೆ – ತಾಜ್ ಉದ್ದೀನ್ ಮಲ್ಲಿಕ್ ಅರೆಸ್ಟ್
ತೋಟದ ಮಾಲೀಕ ಜಗದೀಶ್ ತಮಗೆ ಹೊಡೆದಿರುವುದು ಮಾತ್ರವಲ್ಲದೇ 6 ಕುಟುಂಬದ 14 ಕಾರ್ಮಿಕರನ್ನು ಒಂದು ದಿನವಿಡೀ ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ನೊಂದ ಕಾರ್ಮಿಕರು ಮಾಲೀಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಾರ್ಮಿಕರ ಬಳಿ ಇದ್ದ ಮೊಬೈಲ್ ಅನ್ನೂ ಕೂಡ ಮಾಲೀಕ ಕಿತ್ತುಕೊಂಡಿದ್ದು, ಗರ್ಭಿಣಿಯೊಬ್ಬಳು ತನ್ನ ಫೋನ್ ಅನ್ನು ಕೊಡಲು ಹಿಂದೇಟು ಹಾಕಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಮಾಲೀಕ 2 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿದ್ದರಿಂದ ಆಕೆಗೆ ಗರ್ಭಪಾತವಾಗಿರುವುದಾಗಿ ಆಕೆಯ ತಾಯಿ ಗೀತಾ ಆರೋಪಿಸಿ, ಆಕ್ರೋಶ ಹೊರಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೋಟದ ಮಾಲೀಕ ಜಗದೀಶ್ ಹಾಗೂ ತಿಲಕ್ ಎಂಬವರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಸೆಕ್ಷನ್ 504(ಶಾಂತಿ ಭಂಗವನ್ನು ಮಾಡಲು ಉದ್ದೇಶಿಸುವುದಕ್ಕಾಗಿ ಉದ್ದೇಶ ಪೂರ್ವಕ ಅವಮಾನ), 323(ಸ್ವಯಿಚ್ಛೆಯಿಂದ ಗಾಯವನ್ನುಂಟುಮಾಡಿದ್ದಕ್ಕೆ ದಂಡನೆ), 342(ಅಕ್ರಮ ಬಂಧನಕ್ಕಾಗಿ ದಂಡನೆ) ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮೊರಾರ್ಜಿ ಶಾಲೆಗಳಲ್ಲಿ ನಡೆದಿದ್ಯಾ ಆರ್ಎಸ್ಎಸ್ ಶಿಬಿರ..?