ಹಾಸನ: ಸಾಕು ಎಮ್ಮೆಯೊಂದು ಹುಚ್ಚಾಟ ನಡೆಸಿದ್ದರ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಚೆನ್ನಾಪುರದಲ್ಲಿ ನಡೆದಿದೆ.
ಚೆನ್ನಾಪುರ ಗ್ರಾಮದ ರುದ್ರೇಗೌಡ (57) ಎಮ್ಮೆ ದಾಳಿಗೆ ಒಳಗಾಗಿ ಮೃತಪಟ್ಟ ವ್ಯಕ್ತಿ. ಮಂಗಳವಾರ ಗ್ರಾಮದಲ್ಲಿ ಸಾಕು ಎಮ್ಮೆಯೊಂದು ಹುಚ್ಚಾಟ ನಡೆಸಿ ತಿವಿದು ಹಲವು ಜನರಿಗೆ ಗಾಯಗೊಳಿಸಿದೆ. ಈ ವೇಳೆ ಎಮ್ಮೆ ದಾಳಿಗೆ ತೀವ್ರವಾಗಿ ತುತ್ತಾದ ರುದ್ರೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪಶುಸಂಗೋಪನ ಇಲಾಖೆಯ ಸಿಬ್ಬಂದಿ ಎಮ್ಮೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಎಮ್ಮೆ ದಾಳಿಗೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಮೃತ ವ್ಯಕ್ತಿಯ ಕುಟುಂಬ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.