ತುಮಕೂರು: ಗಣಿ ಬಾಧಿತ ಪುನಶ್ಚೇತನ ನಿಧಿ ಬಳಸಿಕೊಂಡು ಜಿಲ್ಲೆಯ ಕೆ.ಬಿ.ಕ್ರಾಸ್ ಬಳಿ ಅತ್ಯಾಧುನಿಕ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಕೋರಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
- Advertisement 2
ಪತ್ರದಲ್ಲಿ ಏನಿದೆ?
ಪ್ರಸ್ತುತ ಕೊರೊನಾ ಹೆಮ್ಮಾರಿ ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೇ ಇಡೀ ಪ್ರಪಂಚಕ್ಕೆ ಅನೇಕ ಪಾಠಗಳನ್ನು ಕಲಿಸುವ ಜೊತೆಗೆ ಸಮಸ್ಯೆಗಳನ್ನು ಪರಿಚಯಿಸಿದೆ. ಭವಿಷ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾದರೆ ಅದನ್ನು ನಿಭಾಯಿಸುವುದು ಸದ್ಯದ ನಮ್ಮ ಮುಂದಿರುವ ದೊಡ್ಡ ಸವಾಲು. ಕೊರೊನಾ 1, 2 ಮತ್ತು 3ನೇ ಅಲೆಗಳ ಜೊತೆಗೆ ನಂತರದ ದಿನಗಳಲ್ಲಿ ಯಾವುದೇ ಗಂಭೀರ ಪರಿಸ್ಥಿತಿ ನಿರ್ಮಾಣವಾದರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಬಗ್ಗೆ ಚಿಂತಿಸಬೇಕಿದೆ. ಹಾಗಾಗಿ ಗಣಿಬಾಧಿತ ಪ್ರದೇಶಗಳಲ್ಲೊಂದಾದ ತುಮಕೂರು ಜಿಲ್ಲೆಯಲ್ಲಿ ಸದ್ಯಕ್ಕೆ ಬರೋಬ್ಬರಿ 2,554 ಕೋಟಿ ರೂ. ನಿಧಿ ಸಂಗ್ರಹವಾಗಿದ್ದು ಈ ಹಣವನ್ನು ಆರೋಗ್ಯ ಸೇರಿದಂತೆ ಗಣಿಬಾಧಿತ ಪ್ರದೇಶಗಳಲ್ಲಿ ಪುನಶ್ಚೇತನ ಕಾರ್ಯಕ್ರಮ ಅನುಷ್ಠಾನ ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ಸಿಇಸಿ(ಸೆಂಟ್ರಲ್ ಎನ್ಫೋರ್ಸ್ಮೆಂಟ್ ಕಮಿಟಿ) ಉಸ್ತುವಾರಿಯಲ್ಲಿ ಈ ಹಣ ಬಳಸಬೇಕಿದೆ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಬಂದ್ರೂ ಜಯಿಸುತ್ತೇನೆಂದು, ವ್ಯಾಕ್ಸಿನ್ ತೆಗೆದುಕೊಳ್ಳಲು ಅಸಡ್ಡೆ- ಸರ್ಕಾರಿ ವೈದ್ಯ ಕೊರೊನಾಗೆ ಬಲಿ
- Advertisement 3
- Advertisement 4
ಜೊತೆಗೆ ಕೊರೊನಾ 1ನೇ ಮತ್ತು 2ನೇ ಅಲೆಗಳ ನಂತರ ಜನಸಾಮಾನ್ಯರ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಸೂಕ್ತ ಆರೋಗ್ಯ ಸೌಲಭ್ಯಗಳನ್ನು ಒದಗಿಸಿ ಚಿಕಿತ್ಸೆ ನೀಡಿ ಅವರ ಪ್ರಾಣ ರಕ್ಷಣೆ ಮಾಡಬೇಕಾಗಿರುವುದು ಅತ್ಯಂತ ತುರ್ತು ವಿಚಾರವಾಗಿದೆ. ಮೂರನೇ ಅಲೆಯ ನಿರೀಕ್ಷೆಯಿದ್ದು ಭವಿಷ್ಯದಲ್ಲಿ ಹಲವು ರೀತಿಯ ವೈರಾಣು, ಬ್ಯಾಕ್ಟೀರಿಯಾ ಮತ್ತು ಮತ್ತಷ್ಟು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಇಂತಹ ಕಠಿಣ ಪರಿಸ್ಥಿತಿ ನಿಭಾಯಿಸಲು ನಾವು ಮತ್ತಷ್ಟು ಸನ್ನದ್ಧರಾಗಿರಬೇಕು ಈ ನಿಟ್ಟಿನಲ್ಲಿ ನಾಗರಿಕ ಸರ್ಕಾರಗಳು ಗಂಭೀರ ಚಿಂತನೆ ನಡೆಸಲು ಇದು ಸಕಾಲ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ
ನನ್ನ ಮನವಿಯಂತೆ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ಆಸ್ಪತ್ರೆ ನಿರ್ಮಾಣ ಆದರೆ ತುಮಕೂರು ಜಿಲ್ಲೆಯ ಜನತೆ ಅಷ್ಟೇ ಅಲ್ಲದೆ ಹಾಸನ ಮತ್ತು ಮಂಡ್ಯ ಜಿಲ್ಲೆಯ ಜನರಿಗೂ ಉಪಯೋಗ ಆಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.