ಹಾಸನ: ಮಳೆ ಹಾನಿ ಬಗ್ಗೆ ವೀಕ್ಷಿಸಲು ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿರುವ ಸಚಿವ ಗೋಪಾಲಯ್ಯ, ಹಾಸನ, ತುಮಕೂರು, ಮಂಡ್ಯ ಮೂರು ಜಿಲ್ಲೆಯ ಕೆರೆ ಕಟ್ಟೆ ತುಂಬಿಸಲು ಮೊದಲ ಆದ್ಯತೆ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಹಾಸನ ಜಿಲ್ಲೆಯಾದ್ಯಂತ ಮಳೆ ಹಾನಿ ಬಗ್ಗೆ ವೀಕ್ಷಿಸಲು ಜಿಲ್ಲೆಯಲ್ಲಿ ಸಚಿವ ಗೋಪಾಲಯ್ಯ ಪ್ರವಾಸದಲ್ಲಿದ್ದು, ಈ ವೇಳೆ ಹೇಮಾವತಿ ಅಣೆಕಟ್ಟೆ ವೀಕ್ಷಿಸಿ ಅಧಿಕಾರಿಗಳಿಂದ ನೀರಿನ ಸಂಗ್ರಹದ ಮಾಹಿತಿ ಪಡೆದರು.
ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮಳೆಯಿಂದ ಸಮಸ್ಯೆ ಆಗದ ರೀತಿ ಅಧಿಕಾರಿಗಳು ನಿಭಾಯಿಸುತ್ತಾರೆ. ಮಳೆಯಿಂದ ಬೆಳೆ ಹಾನಿಯಾಗಿದೆ. ವಿದ್ಯುತ್ ಕಂಬ, ಮನೆಗಳು ಧರೆಗುರುಳಿವೆ. ಶಾಸಕರು ಅಧಿಕಾರಿಗಳ ಸಲಹೆ ಪಡೆದು ಎಲ್ಲವನ್ನು ಸರಿ ಪಡಿಸುತ್ತೇನೆ. ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಬಿಡಬೇಕಾದ ನೀರು ಬಿಡಲೇಬೇಕು. ತುಮಕೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಗೂ ತೊಂದರೆ ಆಗದಂತೆ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅರಕಲಗೂಡು ಕ್ಷೇತ್ರದ ಶಾಸಕ ಎಟಿ.ರಾಮಸ್ವಾಮಿ, ಪ್ರವಾಹ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕಳೆದ ಬಾರಿಯಷ್ಟು ಈ ಬಾರಿ ಹಾನಿಯಾಗಲ್ಲ. ಈಗ ಆಗಿರುವ ಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಅದಕ್ಕೆ ಅವರು ಕೂಡ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.