ಬೆಂಗಳೂರು: ನಗರದ ಜನನಿಬಿಡ ಪ್ರದೇಶದಲ್ಲಿ ಹಾಫ್ ಲಾಕ್ಡೌನ್ ಜಾರಿ ಆಗುತ್ತಿದೆ. ಯಶವಂತಪುರದ ಮಾರುಕಟ್ಟೆಯ ವ್ಯಾಪಾರಕ್ಕೆ ಬಿಬಿಎಂಪಿ ಸಮಯ ನಿಗದಿ ಮಾಡಿದೆ.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕೊಡಲಾಗಿದೆ. ಯಶವಂತಪುರ ಮಾರ್ಕೆಟ್ ಹೂವು, ಹಣ್ಣು, ತರಕಾರಿ, ದಿನಸಿ ಅಂಗಡಿಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಕೊರೊನಾ ಅಬ್ಬರ ಹೆಚ್ಚಾದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇತ್ತ ಶಾಂತಿನಗರದಲ್ಲಿ ಸೆಲ್ಫ್ ಲಾಕ್ಡೌನ್ ಮಾಡಿಕೊಳ್ಳುವಂತೆ ಶಾಸಕ ಎನ್.ಎ.ಹ್ಯಾರಿಸ್ ವ್ಯಾಪಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಶಾಂತಿನಗರದ ಪ್ರಮುಖ ರಸ್ತೆಗಳಲ್ಲಿ ಸೆಲ್ಫ್ ಲಾಕ್ಡೌನ್ ಮಾಡುವ ಕುರಿತು ಅಭಿಯಾನ ಆರಂಭಿಸಿದ್ದಾರೆ. ಸಚಿವರ ಅಭಿಯಾನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಂತಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಂ.ಜಿ.ರೋಡ್, ಬ್ರಿಗೇಡ್, ಚರ್ಚ್ ಸ್ಟ್ರೀಟ್ ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಆರಂಭವಾಗಿದ್ರೆ, ಕೆಲ ವ್ಯಾಪಾರಿಗಳು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡಿದ್ದಾರೆ.