ಬೆಂಗಳೂರು: ಹಾಡಹಗಲೇ ಫೈನಾನ್ಶಿಯರ್ ಕೊಲೆ ಮಾಡಿರುವ ಪ್ರಕರಣ ಸಂಬಂಧಿಸಿದಂತೆ ಇಂದು ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ನೀಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನ ಬನಶಂಕರಿ ಮೆಟ್ರೋ ಸ್ಟೇಷನ್ ಮುಂಭಾಗ ಹಾಡಹಗಲೇ ಫೈನಾನ್ಶಿಯರ್ ಮದನ್ ಅನ್ನೋರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಯನಗರ ಪೊಲೀಸರು, ಆರೋಪಿಗಳ ಬೆನ್ನು ಬಿಳುತ್ತಿದ್ದಂತೆ ಅವರಿಂದ ತಪ್ಪಿಸಿಕೊಳ್ಳೋಕೆ ಪ್ಲಾನ್ ಮಾಡಿದ್ದಾರೆ. ನಿನ್ನೆ ವಕೀಲರ ವೇಷದಲ್ಲಿ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರಾಗಿದ್ರು.
ಕೋರ್ಟ್ ಪರಿಶೀಲನೆ ನಡೆಸಿ ಎಫ್ಐಆರ್ ನಲ್ಲಿ ಆರೋಪಿಗಳ ಹೆಸರು ಉಲ್ಲೇಖ ಆಗದೇ ಅಪರಿಚಿತರು ಎಂದು ಬರೆಯಲಾಗಿತ್ತು. ಜೊತೆಗೆ ಕೊರೋನಾ ಇರೋದರಿಂದ ಯಾವುದೇ ಕೋರ್ಟಿಗೆ ಸಾರ್ವಜನಿಕರ ಎಂಟ್ರಿ ನಿಷೇಧಿಸಲಾಗಿತ್ತು. ಈ ಎರಡು ಕಾರಣಗಳಿಂದಾಗಿ ಏಳು ಜನ ಕೊಲೆ ಆರೋಪಿಗಳನ್ನು ಜಯನಗರ ಪೊಲೀಸರ ವಶಕ್ಕೆ ನೀಡಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ತಲಘಟ್ಟಪುರ ಬಳಿಯ ತುರೆಹಳ್ಳಿ ಫಾರೆಸ್ಟ್ ಬಳಿಗೆ ಕರೆದುಕೊಂಡು ಹೋಗಲಾಗಿತ್ತು.
ಇಂದು ಬೆಳಗ್ಗಿನ ಜಾವ ಸ್ಥಳಕ್ಕೆ ಕರೆದುಕೊಂಡು ಹೋದ ವೇಳೆ ಆರೋಪಿಗಳಾದ ನವೀನ್, ಮಹೇಶ್ ಅನ್ನೋರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಎಸ್ಕೇಪ್ ಆಗಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಜಯನಗರ ಪೊಲೀಸರು, ಇಬ್ಬರ ಕಾಲಿಗೂ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಸಹೋದರಿಯ ಮೇಲೆಯೇ ಹಲ್ಲೆಗೈದ ಅಣ್ಣ-ತಮ್ಮ..!
ಸದ್ಯ ಈ ಪ್ರಕರಣದಲ್ಲಿ ಏಳು ಜನರನ್ನು ಬಂಧಿಸಿದ್ದು, ಕಳೆದ ಡಿಸೆಂಬರ್ ನಲ್ಲಿ ಹಾಸನದ ಬಳಿ ಲಿಂಗಾ ಅನ್ನೋರ ಕೊಲೆಗೆ ಪ್ರತಿಕಾರವಾಗಿ ಫೈನಾನ್ಸಿಯರ್ ಮದನ್ ಕೊಲೆ ಮಾಡಿರೋದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಕೊಲೆಗೆ ಸಂಬಂಧಿಸಿದ ಇನ್ನೂ ಕೆಲ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.