ಚಾಮರಾಜನಗರ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗೋದು ಕನಸಿನ ಮಾತು, ಅವರು ಅತ್ತುಕರೆದು ವಿರೋಧಪಕ್ಷದ ನಾಯಕರಾಗಿದ್ದಾರೆ, ಆ ಕೆಲಸ ಮಾಡಿಕೊಂಡಿರಲಿ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹರಿಹಾಯ್ದಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬಿಜೆಪಿ ಸ್ಥಿರ ಸರ್ಕಾರವಿದೆ, ಚುನಾವಣೆಗೆ ಇನ್ನೂ ಎರಡುವರೆ ವರ್ಷ ಇದೆ. ಆದರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಚುನಾವಣೆ ಬಂದಾಗ ಅವರ ಪಕ್ಷದವರು ಇಷ್ಟಪಟ್ಟರೆ ಮುಖ್ಯಮಂತ್ರಿ ಮಾಡಲಿ ಎಂದು ಅವರು ವ್ಯಂಗ್ಯವಾಡಿದರು.
ಯಾವುದೇ ಸಿಎಂ ಎರಡು ಕಡೆ ಸ್ಪರ್ಧಿಸುವುದಿಲ್ಲ. ಆದರೆ ಸಿದ್ದರಾಮಯ್ಯ ಬಾದಾಮಿ, ಚಾಮುಂಡೇಶ್ವರಿ ಎರಡೂ ಕಡೆ ಸ್ಪರ್ಧಿಸಿದ್ದರು. ಬಾದಮಿಯಲ್ಲಿ 1,600 ಮತಗಳಿಂದ ಗೆಲ್ಲದಿದ್ದರೆ ಹೆಚ್.ಸಿ.ಮಹದೇವಪ್ಪ, ಧ್ರುವನಾರಾಯಣ್ ತರ ಅವಿತುಕೊಂಡಿರುತ್ತಿದ್ದರು ಎಂದು ಶ್ರೀನಿವಾಸಪ್ರಸಾದ್ ಲೇವಡಿ ಮಾಡಿದರು.