– ಬಂಧಿತನಿಂದ 2 ಲಕ್ಷ ಹಣ ವಶ
ನೆಲಮಂಗಲ: ಗೋದಾಮಿನಲ್ಲಿ ಕಳ್ಳತನ ಮಾಡಿ ಸಿಗರೇಟ್ ಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಓರ್ವ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬಂಧಿತನನ್ನು ರಾಮಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ಐಟಿಸಿ ಗೋದಾಮಿನಿಂದ ಸಿಗರೇಟ್ ಗಳನ್ನು ಕಳ್ಳತನ ಮಾಡುತ್ತಿದ್ದ. ಮತ್ತೊಬ್ಬ ಆರೋಪಿ ಅನಿಲ್ ಪರಾರಿಯಾಗಿದ್ದಾನೆ. ಈ ಇಬ್ಬರು ಆರೋಪಿಗಳು, ಮಧ್ಯಪ್ರದೇಶ ಮೂಲದವರಾಗಿದ್ದಾರೆ.
ಬಂಧಿತ ರಾಮಕೃಷ್ಣಪ್ಪನಿಂದ ಬರೋಬ್ಬರಿ 2 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಐನಾತಿ ಆರೋಪಿಗಳು ಕದ್ದ ಸಿಗರೇಟ್ ಗಳನ್ನ ಲಾರಿ ಚಾಲಕರಿಗೆ ಮಾರಾಟ ಮಾಡುತ್ತಿದ್ದರು. ಡಾಬಸ್ ಪೇಟೆ ಪೊಲೀಸ್ ಠಾಣಾ ಪಿಎಸ್ಐ ಮಂಜುನಾಥ್ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದು ಹಣ ವಶಪಡಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಡಾಬಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಆರೋಪಿಗಳು ಸಿಗರೇಟ್ ಮಾರಾಟ ಮಾಡಿ ಬಂದ ಹಣವನ್ನ ಹಳೆಯ ಜೋಪಡಿಯ ಗುಡಿಸಲಿನ ಬ್ಯಾಗ್ ನಲ್ಲಿ ಶೇಖರಣೆ ಮಾಡಿದ್ದರು.