– ಓವೈಸಿಯನ್ನು ನಾಯಿ ಹೋಲಿಸಿದ ಪ್ರಮೋದ್
ಕೊಪ್ಪಳ: ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದ್ರೆ, ಅಂತವರನ್ನ ಜನ ಚಪ್ಪಲಿ ತಗೊಂಡು ಬೆನ್ನು ಹತ್ತುತ್ತಾರೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಕೊಪ್ಪಳದಲ್ಲಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ರಾಜಕೀಯ ದುಷ್ಟತನ ಮಾಡಬೇಡಿ. ಒಂದು ವೇಳೆ ರಾಜಕೀಯ ದುಷ್ಟತನ ಮಾಡಿದರೆ ಜನ ಚಪ್ಪಲಿ ತಗೊಂಡು ಬೆನ್ನು ಹತ್ತುತ್ತಾರೆ. ಈ ಹಿಂದೆ ಅನಂತ್ ಕುಮಾರ್ ಹೆಗಡೆ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿದ್ರು. ಹಿಂದೆ ಕತ್ತಿ ನಾನೇ ಮುಖ್ಯಮಂತ್ರಿ ಎಂದರು. ಇದೆಲ್ಲ ಸುಳ್ಳು, ಅನಾವಶ್ಯಕ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಮುತಾಲಿಕ್ ಮನವಿ ಮಾಡಿದರು.
ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಕೈ ಬಿಟ್ಟ ವಿಚಾರದ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ್, ನಾನು ಇದನ್ನು ಸ್ವಾಗತ ಮಾಡ್ತೀನಿ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಈತನನ್ನು ಪಠ್ಯಪುಸ್ತಕದಿಂದ ತೆಗೆದಿರುವ ವಿಚಾರವನ್ನು ಸ್ವಾಗತಿಸುತ್ತೇನೆ ಎಂದರು.
ಇದೇ ವೇಳೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಮೋದಿ ಭಾಗಿಯಾಗಬಾರದು ಎಂದು ಓವೈಸಿ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮೋದಿ ಆನೆ ಇದ್ದಂಗೆ. ಓವೈಸಿ ನಾಯಿ ಇದ್ದಂಗೆ, ಅದೊಂದು ಕಸದ ತುಂಡು. ಹೀಗಾಗಿ ಅಂತವರು ಬೊಗಳಿದ್ರೆ ಏನೂ ಆಗಲ್ಲ ಎನ್ನುವ ಮೂಲಕ ಓವೈಸಿಯನ್ನು ನಾಯಿಗೆ ಹೋಲಿಸಿದರು.
ಯಾವುದೇ ಗದ್ದಲ ಗಲಭೆ ಇಲ್ಲದೆ ರಾಮಮಂದಿರ ನಿರ್ಮಾಣ ಕಾರ್ಯ ಆಗತ್ತೆ ಎಂದು ಪ್ರಮೋದ್ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು.