ಬೆಂಗಳೂರು: ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಆರೋಪ, ಪ್ರತ್ಯಾರೋಪ ಮಾಡಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿ ಆದೇಶಿಸಿದೆ.
ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ರೂಪಾ ಅವರನ್ನು ಕರಕುಶಲ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆ ಮಾಡಿದೆ. ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇವರಿಬ್ಬರ ಜೊತೆಗೆ 7 ಐಪಿಎಸ್ ಅಧಿಕಾರಿಗಳನ್ನು ಕೂಡ ಟ್ರಾನ್ಸ್ಫರ್ ಮಾಡಲಾಗಿದೆ.
ಯಾರು ಎಲ್ಲಿಗೆ?
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿ ಡಾ.ಕೆ.ರಾಮಚಂದ್ರ ರಾವ್ ಅವರನ್ನು ಕುಂದುಕೊರತೆ ಮತ್ತು ಮಾನವ ಹಕ್ಕುಗಳ ಎಡಿಜಿಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಗ್ರೇವಿಯೆನ್ಸ್ ಅಂಡ್ ಹ್ಯೂಮನ್ ರೈಟ್ಸ್ ಎಡಿಜಿಪಿಯಾಗಿದ್ದಂತ ಮಾಲಿನಿ ಕೃಷ್ಣಮೂರ್ತಿಯವರನ್ನು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಿ.ರೂಪಾ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ಎಸಿಬಿಯ ಐಜಿಪಿಯ ಚಂದ್ರಶೇಖರ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯಾಗಿ, ಮೈಸೂರು ವಿಭಾಗದ ಐಜಿಪಿ ವಿಪುಲ್ ಕುಮಾರ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಐಜಿಪಿ ಮತ್ತು ಡೈರೆಕ್ಟರ್ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ.
ಮಂಗಳೂರಿನ ಡಿಐಜಿ ಹಾಗೂ ಕಮೀಷನರ್ ವಿಕಾಸ್ ಕುಮಾರ್ ವಿಕಾಸ್ ಅವರನ್ನು, ಕರ್ನಾಟಕ ಮೀಸಲು ಪೊಲೀಸ್ ನ ಡಿಐಜಿ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ವರ್ತಿಕಾ ಕಟಿಯಾರ್ ಅವರನ್ನು ಬೆಂಗಳೂರಿನ ಕ್ರೈಮ್ ರೆಕಾರ್ಡ್ ಬ್ಯೂರೋದ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ, ರಂಜಿತ್ ಕುಮಾರ್ ಬಂದರು ಅವರನ್ನು ಮಂಗಳೂರು ಸೌತ್ ನ ಎಸಿಪಿ ಸ್ಥಾನದಿಂದ ಭಟ್ಕಳ ಉಪ ವಿಭಾಗದ ಎಸಿಪಿಯಾಗಿ ನೇಮಕ ಮಾಡಲಾಗಿದೆ.