ಗದಗ: ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆ ರಾಜಕೀಯ ದ್ವೇಷಕ್ಕೆ ರೈತನ ಶೇಂಗಾ ಬೆಳೆಯ ಮೇವು ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆ ಶಿರಹಟ್ಟಿ ತಾಲೂಕಿನ ಪರಸಾಪೂರ ಗ್ರಾಮದ ಜಮೀನಿನಲ್ಲಿ ಕಂಡುಬಂದಿದೆ.
ಹನುಮಂತ ಬೇರಗಣ್ಣವರ್ ಎಂಬವರಿಗೆ ಸೇರಿದ ಬಣವಿ (ಮೇವು) ಸುಟ್ಟು ಭಸ್ಮವಾಗಿದೆ. ಮಾಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಸಾಪೂರ 6ನೇ ವಾರ್ಡ್ ನಿಂದ ಅಭ್ಯರ್ಥಿಯಾಗಿ ಹನುಮಂತ ಕಣಕ್ಕಿಳಿದ್ದರು. ಹೇಗಾದರು ಮಾಡಿ ಅವನನ್ನು ಹತ್ತಿಕ್ಕಬೇಕು ಎನ್ನುವ ದೃಷ್ಟಿಯಿಂದ ಶೇಂಗಾ ಬಣವಿಗೆ ಬೆಂಕಿ ಇಟ್ಟಿರುವ ಆರೋಪ ಕೇಳಿಬರುತ್ತಿದೆ. ರಾಜಕೀಯ ವೈಷಮ್ಯಕ್ಕೆ ಅಭ್ಯರ್ಥಿಯ ಶೇಂಗಾ ಬಣವಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಇಟ್ಟು ದ್ವೇಷ ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
5 ಎಕರೆಯಲ್ಲಿ ಬೆಳೆದ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಶೇಂಗಾ ಹಾಗೂ ಹೊಟ್ಟು ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವಷ್ಟರಲ್ಲಿ ಮೇವು ಸುಟ್ಟು ಕರಕಲಾಗಿದೆ. ಸ್ಥಳದಲ್ಲಿ ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.