ಹುಬ್ಬಳ್ಳಿ: ಜಿಲ್ಲೆಯ ರಾಮಲಿಂಗೇಶ್ವರ ನಗರದಲ್ಲಿ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕಿಯನ್ನು ಗೋಕುಲ್ ಠಾಣೆ ಪೊಲೀಸರು ಬೆಂಗಳೂರು ಪೊಲೀಸರ ಸಹಾಯದೊಂದಿಗೆ ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
- Advertisement 2
ಹುಬ್ಬಳ್ಳಿಯ ನಿವಾಸಿ ಶಬನಂ ಗದಗಕರ ಬಂಧಿತ ಯುವತಿ. ಶನಿವಾರ ಮಧ್ಯಾಹ್ನ ಪಕ್ಕದ ಮನೆಯಲ್ಲಿದ್ದ ಅಸ್ಲಾಂ ಬಳ್ಳಾರಿ ಎನ್ನುವವರ ಮಗುವನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಶಬನಂ ನಾಪತ್ತೆಯಾಗಿದ್ದಳು. ಬಳಿಕ ಅಸ್ಲಾಂ ಅವರು ಗೋಕುಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ಮೊಬೈಲ್ ಟವರ್ ಆಧಾರದಲ್ಲಿ ಆರೋಪಿ ಬೆಂಗಳೂರಿನಲ್ಲಿ ಇರುವುದಾಗಿ ತಿಳಿದ ಮೇಲೆ ವಿಶೇಷ ತಂಡ ರಚಿಸಿ ಪತ್ತೆ ಕಾರ್ಯಕ್ಕೆ ಇಳಿದಿದ್ದರು. ಇದನ್ನೂ ಓದಿ: ಪ್ರತ್ಯೇಕ ಪ್ರಕರಣಗಳಲ್ಲಿ ಯುವಕ- ಯುವತಿ ಆತ್ಮಹತ್ಯೆಗೆ ಶರಣು
- Advertisement 3
ಶಬನಂ ಬೆಂಗಳೂರಿನ ಯುವಕನನ್ನು ಮದುವೆಯಾಗಿ, ವಿಚ್ಛೇದನ ಪಡೆದು ಮಂಡ್ಯದ ವ್ಯಕ್ತಿಯ ಜೊತೆ ಸ್ನೇಹದಲ್ಲಿರುವುದು ತಿಳಿದು ಬಂದಿತ್ತು. ನಂತರ ಶಬನಂ ಬಾಲಕಿ ಜೊತೆ ಅವನಲ್ಲಿಗೆ ತೆರಳುತ್ತಿರುವ ಮಾಹಿತಿ ಆಧರಿಸಿ, ಪೊಲೀಸರು ಅವನನ್ನು ಸಂಪರ್ಕಿಸಿ ಸಹಕಾರ ಕೋರಿದ್ದರು. ಆಗ, ಅವನು ಶಬನಂಗೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಆರನೇ ಪ್ಲಾಟ್ ಫಾರ್ಮ್ ನಲ್ಲಿ ಇರಲು ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದ. ಆರೋಪಿ ಶಬನಂ ಬಗ್ಗೆ ಖಚಿತ ಮಾಹಿತಿ ದೊರೆತ ಮೇಲೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್, ಬೆಂಗಳೂರಿನ ಚಿಕ್ಕಪೇಟೆ ಎಸಿಪಿ ಹಾಗೂ ಉಪ್ಪಾರಪೇಟೆ ಪೊಲೀಸ್ ಸಿಬ್ಬಂದಿ ಮತ್ತು ಬೆಂಗಳೂರು ಪೊಲೀಸರ ಸಹಾಯದೊಂದಿಗೆ ಮಗುವನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
- Advertisement 4
ಆರೋಪಿಯನ್ನು ವಶಕ್ಕೆ ಪಡೆದು ಗೋಕುಲ ಠಾಣೆ ಪೊಲೀಸರು ಮಗುವನ್ನು ಹುಬ್ಬಳ್ಳಿಗೆ ಕರೆತಂದಿದ್ದಾರೆ. ಘಟನೆಯ ಕುರಿತು ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.