ಬೆಂಗಳೂರು: ಮಂಗಳವಾರ ಇಡೀ ದೇಶದಾದ್ಯಂತ ಸಂಭ್ರಮ, ಸಡಗರದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನಗರದ ಯಲಹಂಕದ ವಿಶ್ವವಿದ್ಯಾಪೀಠದಲ್ಲಿ 72ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಯಿತು. ಪ್ರತಿವರ್ಷ ಮಕ್ಕಳೊಂದಿಗೆ ಗಣತಂತ್ರ ದಿವಸವನ್ನು ಸಂಭ್ರಮಿಸಲಾಗುತ್ತಿತ್ತು. ಆದ್ರೆ ಈ ವರ್ಷ ಶಾಲೆಗೆ ಮಕ್ಕಳು ಬಾರದಿದ್ದರೂ ವಿದ್ಯಾರ್ಥಿಗಳಿಗೆ ಗಣತಂತ್ರದ ದಿನವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕಲ್ಪಿಸಲಾಗಿತ್ತು.
ಸಂವಿಧಾನಕ್ಕೆ ಗೌರವ ಸಲ್ಲಿಸುವುದರೊಂದಿಗೆ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಸೇನಾನಿಗಳಿಗೆ ನಮನವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಿಂದ ಧ್ವಜಾರೋಹಣ ನೆರವೇರಿಸಲಾಯಿತು.
ಈ ಬಾರಿಯ ವಿಶೇಷತೆಗಳ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಲೆಯ ನಿರ್ದೇಶಕಿ ಸುಶೀಲಾ ಸಂತೋಷ್, ಶಾಲೆಯಿಂದ ದೇಶಾಭಿಯಾನ ಮೂಡಿಸುವ ಸ್ತಬ್ಧ ಚಿತ್ರ ಹಾಗೂ ದೇಶಭಕ್ತಿ ಪ್ರದರ್ಶಿಸುವ ಚಿತ್ರಗಳನ್ನು ಪ್ರದರ್ಶಿಸಲಾಯಿತು ಎಂದರು.
ಶಾಲಾ ಸಿಬ್ಬಂದಿ ವರ್ಗ ಹಾಗೂ ವಾಹನ ಚಾಲಕರುಗಳಿಂದ ಪಥಸಂಚಲನ ನಡೆಸಿದ್ರು. ಜೊತೆಗೆ ಶಾಲಾ ಸಹಾಯಕ ವರ್ಗದವರಿಂದ ನಡೆದ ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆಯಿತು ಜೊತೆಗೆ ಶಾಲಾ ಶಿಕ್ಷಕ ವರ್ಗದವರಿಂದ ದೇಶದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪ್ರಕಾರಗಳು ಕಣ್ಮನ ಸೆಳೆದವು.
ನಮ್ಮ ದೇಶದ ಭೂಪಟ ಕಣ್ಣಮುಂದೆ ನಿಲ್ಲುವಂತೆ ಶಾಲೆ ಆವರಣದಲ್ಲಿ ಶಾಲೆಯ ಎಲ್ಲಾ ಸಿಬ್ಬಂದಿಯವರಿಂದ ಭಾರತಾಂಬೆಯ ಆಕೃತಿಯನ್ನು ರಚಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಈ ಎಲ್ಲಾ ಕಾರ್ಯಕ್ರಮಗಳನ್ನು ಮಕ್ಕಳು ಮನೆಯಲ್ಲೇ ಕುಳಿತು ಕಣ್ತುಂಬಿಕೊಂಡರು.