ಬೆಳಗಾವಿ: ತನ್ನ ಮನೆ ಮುಂದೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯ ನನ್ನ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ಗೊತ್ತಾದ ತಕ್ಷಣ ಈ ವಿಷಯ ಪರಿಶೀಲನೆ ಮಾಡಿದ್ದೇನೆ. 2019ರಲ್ಲಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಗರಗ ಗ್ರಾಮದಲ್ಲಿ ಅವರ ಮನೆ ಬಿದ್ದಿತ್ತು. ಅವರಿಗೆ 50 ಸಾವಿರ ರೂ. ಪರಿಹಾರ ಕೊಟ್ಟಿದ್ದಾರೆ ಎಂದು ತಿಳಿಸಿದರು.
2020ರಲ್ಲಿ ಬಿದ್ದ ಮನೆಗಳಿಗೆ ಸಿಎಂ 5 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದ್ದರು. ಅಧಿಕಾರಿಗಳು ವರದಿ ಕೊಟ್ಟಂತೆ 2019ರಲ್ಲಿ ಬಿದ್ದ ಮನೆಗೆ 5 ಲಕ್ಷ ರೂ. ಪರಿಹಾರ ಅವರು ಕೇಳಿದ್ದರು. ಅವರ ಅರ್ಜಿಯನ್ನು ಡಿಸಿ, ತಹಶಿಲ್ದಾರ್ಗೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಹೇಳಿದ್ದೆ. ಡಿಸಿಯವರು ಪರಿಶೀಲನೆ ಮಾಡಿ ಬರೋದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
2019ರಲ್ಲಿ ಬಿದ್ದ ಮನೆಗೆ ನಿಯಮಾವಳಿ ಪ್ರಕಾರ ಪರಿಹಾರ ಕೊಡಲಾಗಿದೆ. ಮತ್ತೊಮ್ಮೆ ಎರಡನೇ ಸಾರಿ ಪರಿಹಾರ ಕೇಳಲು ಬಂದಿದ್ದರು. ಎರಡು ತಿಂಗಳ ಹಿಂದೆ ನನಗೆ ಕೊಟ್ಟ ಮನವಿಯನ್ನು ಡಿಸಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೆ. ದುರ್ದೈವ ಇಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಎಲ್ಲಾ ರೀತಿಯ ಚಿಕಿತ್ಸೆ ನೀಡಲು ಡಿಸಿಗೆ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ:ಪರಿಹಾರ ಸಿಗದೆ ಬೇಸತ್ತು ಕೇಂದ್ರ ಸಚಿವ ಜೋಶಿ ಮನೆಯಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನ
ಸಾಮಾನ್ಯವಾಗಿ ಎಂಎಲ್ಎ ತಮ್ಮ ಕ್ಷೇತ್ರದಲ್ಲಿ ಏನಾಗಿದೆ ಪರಿಶೀಲಿಸುತ್ತಾರೆ. ಅಮೃತ ದೇಸಾಯಿಯವರು ಇವರಿಗೆ 50 ಸಾವಿರ ರೂ. ಪರಿಹಾರ ಕೊಡಿಸಿದ್ದಾರೆ. ಈಗ ಅದೇ ಮನೆಗೆ ಎರಡನೇ ಬಾರಿ ಪರಿಹಾರ ಕೇಳಿದ್ದಾರೆಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲಿಸುವೆ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದರು.