ಬೆಂಗಳೂರು: ಮನುಷ್ಯ ಅಂದ ಮೇಲೆ ಕೆಲವೊಂದು ವೀಕ್ ನೆಸ್ ಗಳು ಇರುತ್ತವೆ. ಆದರೆ ಅದನ್ನೇ ಬಂಡವಾಳ ಮಾಡಿಕೊಳ್ಳುವುದು ಸರಿಯಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಶಾಸಕ ರಾಜೂ ಗೌಡ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ರಮೇಶಣ್ಣ ಸಂಬಂಧಿಕರು. 2000 ರಿಂದಲೂ ಉತ್ತಮ ಒಡನಾಟ ಇದೆ. ಇದೊಂದು ನೋವಿನ ಸಂಗತಿ. ಯುವತಿಗೆ ಕೆಲಸ ಕೊಡಿಸುವ ನೆಪದಲ್ಲಿ ಮೋಸ ಅಂತ ಮಾಧ್ಯಮಗಳಲ್ಲಿ ಬರುತ್ತಿದೆ. ವೀಡಿಯೋ ನೋಡಿದ್ರೆ ಮೋಸ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಾ ಅಂತ ಪ್ರಶ್ನಿಸಿದರು.
ವ್ಯವಸ್ಥಿತವಾಗಿ ಇದನ್ನ ಮಾಡಿದ್ದಾರೆ. ಹನಿಟ್ರ್ಯಾಪ್ ರೀತಿ ಇದನ್ನ ಮಾಡಿದ್ದಾರೆ. ಸಿಬಿಐನಿಂದ ತನಿಖೆ ಆಗಬೇಕು ಅಂತ ಆಗ್ರಹ ಮಾಡುತ್ತೇನೆ. ರಮೇಶಣ್ಣ ತಪ್ಪು ಮಾಡಿದ್ರೆ ಅವ್ರನ್ಮ ಗಲ್ಲಿಗೇರಿಸಲಿ. ರಾಜಕಿಯ ದೊಡ್ಡ ಹುನ್ನಾರ ನಡೆದಿದೆ ಅನ್ನೋ ಅನುಮಾನ ಕಾಡ್ತಿದೆ ಎಂದು ತಿಳಿಸಿದರು.
ರಷ್ಯಾದಿಂದ ಅಪ್ ಲೋಡ್ ಆಗಿದೆ ಅನ್ನೋ ಮಾಹಿತಿ ಇದೆ. ರಾಜಕೀಯವಾಗಿ ಬೆಳೆಯುತ್ತಾರೆ ಅನ್ನೋದನ್ನ ಸಹಿಸೋಕೆ ಆಗದೆ ಇಂಥದನ್ನ ಮಾಡಿದ್ದಾರೆ. ರಾಜಕೀಯ ಷಡ್ಯಂತ್ರಕ್ಕೆ ರಮೇಶಣ್ಣನ ಕುಟುಂಬ ಕಣ್ಣೀರು ಹಾಕ್ತಿದೆ. ರಮೇಶ್ ಜಾರಕಿಹೊಳಿ ಅವ್ರನ್ನ ತುಂಬಾ ದಿನದಿಂದ ಬಲ್ಲವರೇ ಇಂಥದನ್ನ ಮಾಡಿದ್ದಾರೆ. ದಿನೇಶ್ ಕಲ್ಲಹಳ್ಳಿ ಕೇವಲ ದಾಳವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ನಾಲ್ಕೈದು ಸರ್ವರ್ ನಲ್ಲಿ ಇದು ಅಪ್ ಲೋಡ್ ಮಾಡಿದ್ದಾರೆ ಎಂದು ರಾಜೂ ಗೌಡ ಹೇಳಿದರು.
ಒಂದೊಂದು ಸರ್ವರ್ ಬುಕ್ ಮಾಡ್ಬೇಕು ಅಂದ್ರೆ ಕೋಟಿ ಕೋಟಿ ಹಣ ಕೊಡಬೇಕು. ಹೀಗೆ ಹಣವನ್ನ ದಿನೇಶ್ ಕಲ್ಲಹಳ್ಳಿ ನೀಡಲು ಸಾಧ್ಯವಿಲ್ಲ. ಕೋಟಿ ಕೋಟಿ ಯಾರು ಕೊಟ್ಟಿದ್ದಾರೆ ಅನ್ನೋದು ತನಿಖೆ ಆಗಬೇಕು. ಆರೋಪ ಮುಕ್ತರಾಗಿ ಆಚೆ ಬರ್ತಾರೆ ಅನ್ನೋ ವಿಶ್ವಾಸವಿದೆ ಎಂದರು.
ಪಕ್ಷಕ್ಕೆ ಮುಜುಗರ ಆಗಬಾರದು ಅಂತ ರಾಜೀನಾಮೆ ಕೊಟ್ಟಿದ್ದಾರೆ. ಯಾವುದೇ ಕಂಡೀಷನ್ ಇಲ್ಲದೆ ರಾಜೀನಾಮೆ ಕೊಟ್ಟಿದ್ದಾರೆ. ನಾನು ರಮೇಶ್ ಜಾರಕಿಹೊಳಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇನೆ. ರಮೇಶ್ ಅವರ ಮಗನಿಗೆ ಕೂಡ ಧೈರ್ಯ ತುಂಬಿದ್ದೀನಿ ಎಂದು ಹೇಳಿದರು.