– ಮತಗಟ್ಟೆ ಸುತ್ತ ನಿಂಬೆಹಣ್ಣು ಕಂಡು ಗ್ರಾಮಸ್ಥರಿಗೆ ಭಯ
– ಮತ ಸೆಳೆಯೋಕೆ ವಾಮಾಚಾರ
ಚಿಕ್ಕಬಳ್ಳಾಪುರ: ಮತಗಟ್ಟೆ ಸುತ್ತ ಮಣ್ಣಲ್ಲಿ ನಿಂಬೆಹಣ್ಣನ್ನು ಇಟ್ಟಿದ್ದಕ್ಕೆ ಭಯಗೊಂಡು ನಾಳೆ ಮತದಾನ ಮಾಡದೇ ಇರಲು ಚಿಕ್ಕಬಳ್ಳಾಪುರದ ಕೆಲ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ನಾಳೆ ರಾಜ್ಯದ್ಯಾಂತ ಮೊದಲನೇ ಹಂತದ ಗ್ರಾಮಪಂಚಾಯತಿ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣಾಧಿಕಾರಿಗಳು ಚುನಾವಣೆಗೆ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ಆದರೆ ಜನ ನಾಳೆ ನಾವು ಮತಕೇಂದ್ರದ ಬಳಿ ಕಾಲೇ ಇಡಲ ಅಂತಿದ್ದಾರೆ. ಅಂದಹಾಗೆ ಬಶೆಟ್ಟಿಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಕಂಬಾಲಹಳಿ ಗ್ರಾಮದ ಮತಕೇಂದ್ರ 112 ರಲ್ಲಿ ಮತಕೇಂದ್ರದ ಪ್ರವೇಶ ದ್ವಾರ ಸೇರಿದಂತೆ ಶಾಲಾ ಕಟ್ಟಡದ ಸುತ್ತಲೂ ಗುಣಿ ಅಗೆದು ನಿಂಬೆಹಣ್ಣುಗಳನ್ನು ಇಡಲಾಗಿದೆ.
ಕಂಬಾಲಹಳ್ಳಿ ಗ್ರಾಮದ ಮತ ಕೇಂದ್ರದಲ್ಲಿ ಕಂಬಾಲಹಳ್ಳಿ, ಮಾರಗಾನಪರ್ತಿ, ಸೇರಿದಂತೆ ದೊಡ್ಡಗುಮ್ಮನಹಳ್ಳಿಯ ಗ್ರಾಮಸ್ಥರು ಮತದಾನ ಮಾಡ್ತಾರೆ. ಆದರೆ ಈಗ ಈ ಮೂರು ಗ್ರಾಮದ ಗ್ರಾಮಸ್ಥರು ಜಪ್ಪಯ್ಯ ಎಂದರೂ ನಾವ್ ನಾಳೆ ಮತದಾನ ಮಾಡಲ್ಲ. ನಮಗೆ ವಾಮಾಚಾರದ ಭೀತಿ ಶುರುವಾಗಿದೆ ಎಂದು ಹೇಳುತ್ತಿದ್ದಾರೆ.
ಇದೆಲ್ಲವೂ ಚುನಾವಣೆಗೆ ಸ್ಪರ್ಧಿಸಿರುವ ದಾಸಮ್ಮನವರ ಮಗ ರಾಮಾಂಜಿ ಹಾಗೂ ಆಕೆಯ ಗಂಡ ವೆಂಕಟಪ್ಪನ ಕೃತ್ಯ, ಅಮ್ಮನ ಪರ ಮತಗಳನ್ನ ಸೆಳೆಯೋಕೆ ಮಗ ಈ ರೀತಿ ನಿಂಬೆಹಣ್ಣುಗಳಿಗೆ ವಾಮಾಚಾರ ಮಾಡಿಸಿ ತಂದಿಟ್ಟಿದ್ದಾನೆ ಎಂದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ.