ಚಿಕ್ಕಮಗಳೂರು: ಮಕ್ಕಳಾಗಿಲ್ಲ ಎಂದು ಮನನೊಂದು 58 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನ 58 ವರ್ಷದ ಮಲ್ಲಿಗಮ್ಮ ಎಂದು ಗುರುತಿಸಲಾಗಿದೆ. ಮೃತ ಮಲ್ಲಿಗಮ್ಮ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹುಂಡಿಗನಾಳು ಗ್ರಾಮದ ಮಹಾದೇವಪ್ಪ ಎಂಬವರೊಂದಿಗೆ ಸುಮಾರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. ಮಕ್ಕಳಾಗದ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ ವೈವಾಹಿಕ ಜೀವನದಲ್ಲಿ ಬಿರುಕು ಕಂಡಿತ್ತು. ಜಗಳ ಕೂಡ ನಡೆಯುತ್ತಿತ್ತು. ಒಂದೆಡೆ ಮಕ್ಕಳಾಗಿಲ್ಲ. ಮತ್ತೊಂದೆಡೆ ಗಂಡನ ಜೊತೆ ಜಗಳದಿಂದ ಮನನೊಂದು ಮಲ್ಲಿಗಮ್ಮ ಕಳೆದ ನಾಲ್ಕು ವರ್ಷಗಳಿಂದ ಬಿಳುವಾಲ ಗ್ರಾಮದ ತಂಗಿ ಮನೆಗೆ ಬಂದು ವಾಸವಿದ್ದರು.
ಗುರುವಾರ ಗ್ರಾಮದ ಸಮೀಪವಿರುವ ಗುಡ್ಡೆಕಲ್ಲು ಹತ್ತಿರ ಬಟ್ಟೆ ತೊಳೆಯಲು ಹೋಗಿದ್ದ ಮಲ್ಲಿಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಲ್ಲಿಗಮ್ಮನ ತಂಗಿ ಮಗ ಶಿವರಾಜ್ಕುಮಾರ್ ಕಡೂರು ಠಾಣೆಗೆ ದೂರು ನೀಡಿದ್ದಾರೆ. ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.