ಕಾರವಾರ: ಐಸಿಸ್ ನೊಂದಿಗೆ ನಂಟು ಹೊಂದಿರುವ ಶಂಕೆಯ ಮೇರೆಗೆ ಭಟ್ಕಳದಲ್ಲಿ ಮತ್ತೆ ಎನ್ಐಎ ದಾಳಿ ನಡೆಸಿದ್ದು, ಓರ್ವನನ್ನು ಬಂಧಿಸಲಾಗಿದೆ.
ಪಟ್ಟಣದ ಉಮರ್ ಸ್ಟ್ರೀಟ್ ಹಾಗೂ ತೆಂಗಿನಗುಂಡಿಯ ಸಾಗರ ರಸ್ತೆಯಲ್ಲಿರುವ ಮನೆಗಳ ಮೇಲೆ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿ ಓರ್ವನನ್ನು ಬಂಧಿಸಲಾಗಿದೆ. ಬಂಧಿತನನ್ನು ಜುಪ್ರಿ ಜವಾಹರ್ ದಾಮುದಿ ಎಂದು ಗುರುತಿಸಲಾಗಿದೆ. ಈತ ಐಸಿಸ್ ವೈಸ್ ಆಫ್ ಹಿಂದ್ ನ ವೆಬ್ ಸೈಟ್ ಮೂಲಕ ಭಯೋತ್ಪಾದಕ ಸಂಬಂಧಿ ಬರಹಗಳನ್ನು ದಕ್ಷಿಣ ಭಾರತೀಯ ಭಾಷೆಗಳಿಗೆ ಭಾಷಾಂತರಿಸುತ್ತಿದ್ದ. ಅಬು ಹಜೀರ್ ಅಲ್ ಬದ್ರಿ ಎಂಬುವವನ ಸಂಪರ್ಕದಲ್ಲಿದ್ದ ಕಾರಣ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದನ್ನೂ ಓದಿ: ಭಟ್ಕಳದಲ್ಲಿ NIA ದಾಳಿ- ಭಯೋತ್ಪಾದಕರೊಂದಿಗೆ ಸಂಪರ್ಕ, ಮೂವರು ವಶಕ್ಕೆ
ಜುಪ್ರಿ ಜವಾಹರ್ ದಾವುದಿ ಸದ್ಯ ಅಫ್-ಪಾಕ್ ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಐಸಿಸ್ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದನು. ಅವರು ಭಯೋತ್ಪಾದಕ ಸಂಬಂಧಿ ವಿಚಾರಗಳನ್ನು ಈತನ ಮೂಲಕ ಪ್ರಚಾರ ಮಾಡುತ್ತಿದ್ದರು. ಈ ಮಾಹಿತಿ ಆಧರಿಸಿ ತನಿಖೆ ನಡೆಸಿದ ಎನ್ಐಎ ಅಧಿಕಾರಿಗಳಿಗೆ ಭಟ್ಕಳದ ಜುಪ್ರಿ ಬಳಿ ಎನ್ಕ್ರಿಪ್ಟ್ ಸಂದೇಶ ವಿನಿಮಯ ಮಾಡಿದ್ದ ಮತ್ತು ಈತ ಐಸಿಸ್ ಪ್ರಸಾರ ಚಾನಲ್ ಗಳಲ್ಲಿ ಸದಸ್ಯನಾಗಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದನ್ನೂ ಓದಿ: ಮಾಜಿ ಶಾಸಕ ಇದಿನಬ್ಬನವರ ಮೊಮ್ಮಗನಿಗೆ ಐಸಿಸ್ ನಂಟು – ಎನ್ಐಎಯಿಂದ ಅರೆಸ್ಟ್
ಈ ಎಲ್ಲ ಮಾಹಿತಿ ಆಧರಿಸಿ ಶುಕ್ರವಾರ ಬೆಳಗ್ಗೆಯೇ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಗುಪ್ತವಾಗಿ ದಾಳಿ ಮಾಡಿರುವ ಎನ್ಐಎ ಅಧಿಕಾರಿಗಳು, ಎರಡು ಮನೆಗಳ ಪರಿಶೀಲನೆ ನಡೆಸಿ, ಒಟ್ಟು ಮೂವರನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಎಲ್ಲರನ್ನೂ ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದು, ಅದರಲ್ಲಿ ಜುಪ್ರಿ ಜವಾಹರ್ ದಾಮುದಿ ಬಂಧಿಸಲಾಗಿದೆ. ಅಲ್ಲದೆ ಈತ ಬಳಸುತ್ತಿದ್ದ ಹಲವು ಮೊಬೈಲ್, ಹಾರ್ಡ್ ಡಿಸ್ಕ್, ಎಸ್ಡಿ ಕಾರ್ಡ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಸಂಬಂಧ ತನಿಖೆ ಮುಂದುವರಿದಿದೆ.
ದಾಳಿಯ ವೇಳೆ ಭಟ್ಕಳ ತಾಲೂಕಿನ ಹಲವೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ವಶಕ್ಕೆ ಪಡೆದಿರುವವರ ಮನೆಯ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ತನಿಖೆ ನಡೆಯುತ್ತಿದೆ.