ಬೆಂಗಳೂರು: ನಾನು ಫಸ್ಟ್ ಟೈಮ್ ಬೆಂಗಳೂರಿಗೆ ಬಂದಾಗ ನಟ ಚಿರಂಜೀವಿ ಸರ್ಜಾ ಅವರು ಆಶ್ರಯ ಕೊಟ್ಟಿದ್ದರು. ಅವರು ನನ್ನ ಪಾಲಿನ ಗಾಡ್ ಫಾದರ್ ಎಂದು ಬಿಗ್ ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಚಂದನ್ ಶೆಟ್ಟಿ, ಚಿರು ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ನನ್ನ ತಂದೆ-ತಾಯಿ ಊರಲ್ಲಿದ್ರು. ಆದ್ರೆ ನಾನು ಬೆಂಗಳೂರಿಗೆ ಬಂದಾಗ ಏನು ಮಾಡಬೇಕು ಅಂತ ತಿಳಿದಿರಲಿಲ್ಲ. ಆಗ ಚಿರು ಅವರು ಅರ್ಜುನ್ ಸಜ್ರಾ ಅವರಿಗೆ ನನ್ನನ್ನು ಪರಿಚಯ ಮಾಡಿಸಿ, ಈ ಹುಡುಗ ಚೆನ್ನಾಗಿ ಹಾಡುತ್ತಾನೆ. ಇವರಿಗೆ ಉತ್ತಮ ಭವಿಷ್ಯವಿದೆ. ಹೀಗಾಗಿ ನಮ್ಮ ಮನೆಯಲ್ಲೇ ಇಟ್ಟುಕೊಳ್ಳೋಣ ಎಂದು ಹೇಳಿದ್ದರು. ಆಗ ಇದೇ ಮನೆಯಲ್ಲೇ ಅವರು ನನಗೆ ಆಶ್ರಯ ಕೊಟ್ಟಿದ್ದರು ಎಂದು ನೆನೆದರು.
ಚಿರಂಜೀವಿ ಸರ್ಜಾ ಅವರ ಮನೆಯಲ್ಲಿ ಸುಮಾರು ಒಂದು ವರ್ಷ ಇದ್ದೆ. ಈ ಮಧ್ಯೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಬಳಿ ಕಲಿಯಲು ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ವರದನಾಯ್ಕ್ ಸಿನಿಮಾಕ್ಕೆ ಮೊದಲು ಅವಕಾಶ ಕೊಟ್ಟಿದ್ದರು ಎಂದು ಕಣ್ಣೀರು ಹಾಕಿದರು.
ನನಗಿಂತ ಎಷ್ಟೇ ದೊಡ್ಡವರಾಗಿದ್ದರೂ ಸರ್ ಅಂತ ಕರಿಬೇಡ. ಚಿರು ಅಂತ ಕರೆದರೆ ಸಾಕು ಎಂದು ಹೇಳಿದ್ದರು. ಅವರಿಗೆ ಪಕ್ಷಿ, ಪ್ರಾಣಿಗಳೆಂದೆ ತುಂಬಾ ಪ್ರೀತಿ. ಅವರ ಅಗಲಿಕೆ ಮನಸ್ಸಿಗೆ ಬೇಜಾರು, ನೋವು ತಂದಿದೆ ಎಂದು ಭಾವುಕರಾದರು.