ರಾಯಚೂರು: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ರೈತನೊಬ್ಬ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ನಡೆದಿದೆ.
ನಾಗಪ್ಪ ತಾತೆ (40) ಮೃತ ದುರ್ದೈವಿ ರೈತ. ಈ ಘಟನೆಯಲ್ಲಿ ಒಂದು ಟಗರು ಸಾವನ್ನಪ್ಪಿದ್ದು, ಬೈಕ್ ಸಹ ಬೆಂಕಿಗಾಹುತಿಯಾಗಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ನಾಗಪ್ಪನ ಕುಟುಂಬ ಗುಡಿಸಲಿನಲ್ಲಿ ವಾಸವಾಗಿತ್ತು.
ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಹೊತ್ತಿದೆ. ಕೂಡಲೇ ಗುಡಿಸಲಿನಿಂದ ಕುಟುಂಬದವರೆಲ್ಲಾ ಹೊರಬಂದಿದ್ದಾರೆ. ಆದರೆ ಗುಡಿಸಲಿನಲ್ಲಿದ್ದ 60 ಸಾವಿರ ರೂಪಾಯಿ ಹಣ ತರಲು ಮತ್ತೆ ಒಳಹೋದಾಗ ನಾಗಪ್ಪ ಬೆಂಕಿ ಕೆನ್ನಾಲಿಗೆ ಹೊರಬರಲಾಗದೆ ಗುಡಿಸಿಲಿನಲ್ಲಿ ಸಾವನ್ನಪ್ಪಿದ್ದಾನೆ.
ಸುತ್ತಮುತ್ತ ಹೆಚ್ಚು ಮನೆಗಳು ಇಲ್ಲದ ಹಿನ್ನೆಲೆಯಲ್ಲಿ ಕೂಡಲೇ ಯಾರೂ ಸಹಾಯಕ್ಕೆ ಬರಲು ಸಾಧ್ಯವಾಗಿಲ್ಲ. ಗುಡಿಸಲಿನಲ್ಲಿದ್ದ ಮೂವರು ಮಕ್ಕಳು ಹಾಗೂ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದವಸ , ಧಾನ್ಯ ಸೇರಿ ನಿತ್ಯದ ಸಾಮಗ್ರಿಗಳು ಸಂಪೂರ್ಣ ಭಸ್ಮವಾಗಿವೆ.
ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.