– ಕಂಟೈನ್ಮೆಂಟ್ ಝೋನ್ನ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ
ಗದಗ: ರಾಜ್ಯದೆಲ್ಲೆಡೆ ದ್ವಿತೀಯ ಪಿಯು ಪರೀಕ್ಷೆ ನಡೆದಿದ್ದು, ಹಲವೆಡೆ ವಿದ್ಯಾರ್ಥಿಗಳು ಗುಂಪಾಗಿ ಸೇರಿ ಅವಾಂತರ ಸೃಷ್ಟಿಸಿದ್ದರು. ಇನ್ನೂ ಹಲವೆಡೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಗದಗನಲ್ಲಿ ಒರ್ವ ವಿದ್ಯಾರ್ಥಿಯ ದೇಹದಲ್ಲಿ ಹೆಚ್ಚು ಉಷ್ಣಾಂಶ ಕಂಡು ಬಂದು ಆತಂಕಕ್ಕೀಡು ಮಾಡಿದೆ.
ನಗರದ ಜೆ.ಟಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಓರ್ವ ವಿದ್ಯಾರ್ಥಿ ದೇಹದಲ್ಲಿ ಹೆಚ್ಚು ಉಷ್ಣಾಂಶ ಕಂಡು ಬಂದಿದ್ದು, ಥರ್ಮಲ್ ಸ್ಕ್ರೀನಿಂಗ್ ಮಾಡುವ ವೇಳೆ ಹೆಚ್ಚು ಉಷ್ಣಾಂಶ ಇರುವುದು ಪತ್ತೆಯಾಗಿದೆ. ಪರೀಕ್ಷೆಗೆ ತಡವಾಗುತ್ತದೆ ಎಂಬ ತವಕದಿಂದ ಓಡಿಬಂದಿದ್ದಾನೆ. ಈ ವೇಳೆ ಹೈಟೆಂಪ್ರೆಚರ್ ತೋರಿಸಿದೆ ಎನ್ನಲಾಗುತ್ತಿದೆ. ಇನ್ನು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಕಂಟೈನ್ಮೆಂಟ್ ಪ್ರದೇಶದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ 3 ಜನರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಈ ಮೂವರು ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣಗಳಿಲ್ಲ ಎನ್ನಲಾಗಿದೆ.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ್ದಾರೆ. ಜಿಲ್ಲೆಯ ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮಾಯವಾಗಿತ್ತು. ವಿದ್ಯಾರ್ಥಿಗಳು ಗುಂಪು ಗುಂಪಾಗಿ ಚರ್ಚೆಯಲ್ಲಿ ತೊಡಗಿದ್ದರು. ಮುನ್ಸಿಪಲ್ ಕಾಲೇಜ್ ಆವರಣದಲ್ಲಿ ಸೆಕ್ಷನ್ 144 ನಿಯಮ ಉಲ್ಲಂಘನೆ ಮಾಡಲಾಗಿದೆ. ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜಾರಾಗಿದ್ದರೂ ಮೈದಾನದಲ್ಲಿ ಯುವಕರು ಕ್ರಿಕೆಟ್ ಆಡುವ ದೃಶ್ಯಗಳು ಕಂಡುಬಂತು.
ಪರೀಕ್ಷಾ ಕೇಂದ್ರದ ಬಳಿ ಹೇಳೋರು, ಕೆಳೋರು ಯಾರೂ ಇಲ್ಲದಂತಾಗಿತ್ತು. ಜಿಲ್ಲೆಯ ಗದಗ ರೋಣ, ಗಜೇಂದ್ರಗಡ, ಮುಂಡರಗಿ ಪಟ್ಟಣದಲ್ಲೂ ಇದೇ ರೀತಿಯ ಪರಿಸ್ಥಿತಿ ಇತ್ತು. ಜಿಲ್ಲೆಯ 19 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 11,081 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಬೇರೆ ಜಿಲ್ಲೆಗಳಿಂದ ಬಂದ 541 ವಿದ್ಯಾರ್ಥಿಗಳು ಹಾಗೂ ಹೊರ ರಾಜ್ಯದಿಂದ ಬಂದ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದಾರೆ.