ನವದೆಹಲಿ: ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಅವರನ್ನು ಧೋನಿಗೆ ಹೋಲಿಕೆ ಮಾಡಿ ಮಾತನಾಡುವುದನ್ನು ನಿಲ್ಲಿಸಬೇಕಿದೆ. ಏಕೆಂದರೆ ಪಂತ್ ಎಂದಿಗೂ ಧೋನಿ ಆಗಲೂ ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
2020ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಧೋನಿ ನಿವೃತ್ತಿ ಘೋಷಿಸಿದ್ದರು. ಧೋನಿ ಸ್ಥಾನವನ್ನು ತಂಡದಲ್ಲಿ ತುಂಬುವ ಯುವ ಆಟಗಾರರ ಹುಡುಕಾಟವನ್ನು ನಡೆಸಿದ್ದ ಬಿಸಿಸಿಐ ಆಯ್ಕೆ ಸಮಿತಿ ರಿಷಬ್ ಪಂತ್ ಅವರಿಗೆ ಅವಕಾಶ ನೀಡಿತ್ತು. ಐಪಿಎಲ್ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಪಂತ್ ಕೂಡ ಬೇಗ ತಂಡವನ್ನು ಸೇರಿಕೊಂಡಿದ್ದರು.
ಆದರೆ 2019 ಮತ್ತು 2020ರ ಐಪಿಎಲ್ ಆವೃತ್ತಿ ಮತ್ತು ಟೀಂ ಇಂಡಿಯಾ ಪರ ಪಂತ್ ನಿರೀಕ್ಷಿತ ಪ್ರಮಾಣದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಇದರೊಂದಿಗೆ ಟೀಂ ಇಂಡಿಯಾ ಪರ ಸಿಮೀತ ಓವರ್ ಗಳ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂತ್ ಬ್ಯಾಟಿಂಗ್ ಕುರಿತು ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ಧೋನಿ ವಾರಸುದಾರ ಪಂತ್ ಎಂದು ಕರೆಯುವುದನ್ನು ನಿಲ್ಲಿಸಬೇಕಿದೆ. ಮಾಧ್ಯಮಗಳು ಇಂದಿಗೂ ಧೋನಿ, ಪಂತ್ ನಡುವೆ ಹೋಲಿಕೆ ಮಾಡುತ್ತವೆ. ಆದರೆ ಪಂತ್ ಎಂದಿಗೂ ಧೋನಿ ಆಗಲು ಸಾಧ್ಯವಿಲ್ಲ. ಆತ ರಿಷಬ್ ಪಂತ್ನಂತೆಯೇ ಉಳಿಯುತ್ತಾರೆ ಎಂದು ಹೇಳಿದ್ದಾರೆ.
ಭಾರೀ ಸಿಕ್ಸರ್ ಸಿಡಿಸುವ ಸಾಮರ್ಥ್ಯವಿರುವುದರಿಂದ ಹೋಲಿಕೆ ಮಾಡಲಾಗುತ್ತಿದೆ. ಆದರೆ ಪಂತ್ ಇನ್ನು ಕೀಪಿಂಗ್, ಬ್ಯಾಟಿಂಗ್ ಎರಡಲ್ಲೂ ಸಾಕಷ್ಟು ಸುಧಾರಿಸಿಬೇಕಿದೆ ಎಂದು ಗಂಭೀರ್ ವಿವರಿಸಿದ್ದಾರೆ. 2020ರ ಆವೃತ್ತಿಯಲ್ಲಿ 12 ಪಂದ್ಯಗಳನ್ನು ಆಡಿರುವ ಪಂತ್ ಕೇವಲ 109 ಸ್ಟ್ರೈಕ್ ರೇಟ್ನೊಂದಿಗೆ 285 ರನ್ ಮಾತ್ರ ಗಳಿಸಿದ್ದಾರೆ. ಟೂರ್ನಿಯ ಆರಂಭದ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದ್ದ ಸಂಜು ಸ್ಯಾಮ್ಸನ್ ಅವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್, ಧೋನಿಗೆ ಹೋಲಿಕೆ ಮಾಡಿದ್ದರು. ಈ ವೇಳೆಯೂ ಗಂಭೀರ್ ಪ್ರತಿಕ್ರಿಯೆ ನೀಡಿ, ಆತ ಎಂದಿಗೂ ಸಂಜು ಸ್ಯಾಮ್ಸನ್ ಆಗಿಯೇ ಇರಬೇಕು. ಬೇರೆ ಆಟಗಾರನಂತೆ ಬದಲಾಗುವ ಅಗತ್ಯವಿಲ್ಲ ಎಂದಿದ್ದರು.