ಕಾರವಾರ: ಲಾಕ್ಡೌನ್ ನಿಂದ ಜನ ನಿಬಿಡ ಪ್ರದೇಶದಲ್ಲಿ ಸಂಚಾರ ಕಡಿಮೆಯಾಗುತಿದ್ದಂತೆ ಕಾಡು ಪ್ರಾಣಿಗಳು ಆಹಾರ ಅರಸಿ ಇದೀಗ ನಗರದತ್ತ ಆಗಮಿಸುತ್ತಿವೆ. ಜಿಲ್ಲೆಯ ಕುಮಟಾದ ಮಿರ್ಜಾನ್ ಗ್ರಾಮದ ಸಂತೆಗದ್ದೆಯಲ್ಲಿ ರಾತ್ರಿ ವೇಳೆ ಚಿರುತೆಯೊಂದು ಮನೆಗೆ ನುಗ್ಗಿ ಸಾಕು ನಾಯಿ ಹಾಗೂ ಮರಿಯನ್ನು ಬೇಟೆಯಾಡಿ ತೆಗೆದುಕೊಂಡುಹೋಗಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಸಂತೆ ಗದ್ದೆಯ ವೆಂಕಟೇಶ್ ಈಶ್ವರ ನಾಯ್ಕ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಚಿರತೆ ಆಗಮಿಸಿ, ನಾಯಿ ಹೊತ್ತೊಯ್ದ ವೀಡಿಯೋ ಸೆರೆಯಾಗಿದೆ. ಚಿರತೆ ಮೊದಲು ನಾಯಿ ಮರಿಯನ್ನು ಹೊತ್ತೊಯ್ದಿತ್ತು. ನಂತರ ಮತ್ತೆ ಆಗಮಿಸಿ, ನಾಯಿಯನ್ನು ಸಹ ಹೊತ್ತೊಯ್ದಿದೆ.
ಕುಮಟಾ ಭಾಗದ ಅರಣ್ಯದಲ್ಲಿ ಚಿರತೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದೀಗ ಜನರ ಸಂಚಾರ ಕಡಿಮೆ ಆದ್ದರಿಂದ ಚಿರುತೆಗಳು ಜನ ವಸತಿ ಪ್ರದೇಶಗಳಿಗೂ ಆಗಮಿಸುತಿದ್ದು, ಕೋಳಿ,ನಾಯಿ ಸೇರಿದಂತೆ ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತಿವೆ.