ಬೆಂಗಳೂರು: ಮಗಳ ಮದುವೆ ಮುಗಿಯುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಶತಾಯಗತಾಯ ನಲಪಾಡ್ ಪಟ್ಟಾಭಿಷೇಕಕ್ಕೆ ಡಿಕೆಶಿ ಲಾಬಿ ಮಾಡುತ್ತಿದ್ದು, ಈ ಮೂಲಕ ರಾಜ್ಯ ಕಾಂಗ್ರೆಸ್ಸಿನಲ್ಲಿ ಯುವ ಕಾಂಗ್ರೆಸ್ ಚುನಾವಣಾ ವಿವಾದ ಮತ್ತೆ ಗರಿಗೆದರಿದೆ.
ರಾಜ್ಯ ಯುವ ಕಾಂಗ್ರೆಸ್ ಫಲಿತಾಂಶ ಮರು ಪರಿಶೀಲನೆ ಮಾಡುವಂತೆ ಹೈಕಮಾಂಡ್ ಮೇಲೆ ಡಿಕೆಶಿ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದ ನಲಪಾಡ್ ನನ್ನೇ ಅಧ್ಯಕ್ಷ ಎಂದು ಘೋಷಿಸಿ. ಅಗತ್ಯ ಬಿದ್ದರೆ ರಕ್ಷಾ ರಾಮಯ್ಯರನ್ನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಚುನಾವಣೆಯಲ್ಲಿ ಗೆದ್ದ ನಲಪಾಡ್ನನ್ನೇ ಅಧ್ಯಕ್ಷ ಎಂದು ಘೋಷಿಸುವಂತೆ ಹೈಕಮಾಂಡ್ ಮೇಲೆ ಡಿಕೆಶಿ ಒತ್ತಡ ಹಾಕುತ್ತಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಇನ್ನೊಮ್ಮೆ ಮರು ಎಣಿಕೆ ನಡೆಯಲಿ. ಆದರೆ ಶಿಸ್ತುಪಾಲನಾ ಸಮಿತಿ ನಲಪಾಡ್ ಗೆದ್ದ ನಂತರ ಅವನ ಗೆಲುವನ್ನು ತಡೆ ಹಿಡಿಯೋದು ಸರಿಯಲ್ಲ. ಹೈಕಮಾಂಡ್ ಮಧ್ಯ ಪ್ರವೇಶಿಸಿ ಶಿಸ್ತುಪಾಲನಾ ಸಮಿತಿಯ ತೀರ್ಪನ್ನು ಬದಲಿಸಲಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಮತ್ತೆ ಆರಂಭವಾದ ಗೊಂದಲದಿಂದ ರಕ್ಷಾ ರಾಮಯ್ಯ ಅವರು ಯುವ ಕಾಂಗ್ರೆಸ್ ಅಧ್ಯಕ್ಷ ಪದಗ್ರಹಣ ಮಾಡಿಲ್ಲ. ಇನ್ನೊಂದು ವಾರದಲ್ಲಿ ಎಲ್ಲವನ್ನು ಸರಿಪಡಿಸುವುದಾಗಿ ನಳಪಡ್ ಗೆ ಡಿ.ಕೆ.ಶಿವಕುಮಾರ್ ಅಭಯ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಗೆದ್ದ ನಲಪಾಡ್ಗೆ ಮುಖಭಂಗ – ರಕ್ಷಾ ರಾಮಯ್ಯಗೆ ಅಧ್ಯಕ್ಷ ಪಟ್ಟ