ಮಂಗಳೂರು: ಈಜಾಡಲು ನದಿ ನೀರಿಗಿಳಿದ ಮೂವರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಕರ್ನಿರೆಯ ಶಾಂಭವಿ ನದಿಯಲ್ಲಿ ನಡೆದಿದೆ.
ಬೆಂಗಳೂರು ನಿವಾಸಿ 32 ವರ್ಷದ ಅನಿಲ್ ಮೃತಪಟ್ಟಿರುವ ದುರ್ದೈವಿ. 7 ಮಂದಿ ಯುವಕರು ಬೆಂಗಳೂರಿನಿಂದ ಆಗಮಿಸಿದ್ದರು. ಕರ್ನಿರೆ ಬಳಿಯ ಶಾಂಭವಿ ನದಿಯ ಕಡೆಗೆ ಬಂದಿದ್ದು, ನದಿ ನೀರಿನಲ್ಲಿ ಈಜಾಡಲು ಮೂವರೂ ನೀರಿಗಿಳಿದ್ದಿದ್ದರು. ಈ ವೇಳೆ ಈಜಾಡುತ್ತಿದ್ದ ಮೂವರು ನೀರಿನ ಸೆಳೆತಕ್ಕೆ ಸಿಕ್ಕಿದ್ದು, ನೀರು ಅವರನ್ನು ಕೊಚ್ಚಿಕೊಂಡು ಹೋಗಿತ್ತು. ತಕ್ಷಣ ಅಲ್ಲೇ ಇದ್ದ ಸ್ಥಳೀಯರು ನೀರಿಗಿಳಿದು ಇಬ್ಬರನ್ನು ರಕ್ಷಿಸಿದ್ದಾರೆ.
ಕೊನೆಯದಾಗಿ ಅನಿಲ್ನನ್ನು ರಕ್ಷಿಸುವಲ್ಲಿ ಪ್ರಯತ್ನಪಟ್ಟರೂ ಆತ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.